- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಿಎಂ ಗೆ ವಿಧಾನ ಪರಿಷತ್‌ ಸಭಾಪತಿ ಹೊರಟ್ಟಿ ಪತ್ರ

Horatti [1]ಬೆಂಗಳೂರು: ಸಿಎಂ ಯಡಿಯೂರಪ್ಪಗೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಶಿಕ್ಷಕರ ಕುರಿತು ಪತ್ರ ಬರೆದಿದ್ದಾರೆ. ಅವರ ಪತ್ರದ ವಿವರ ಈ ಕೆಳಗಿನಂತಿದೆ.

ರಾಜ್ಯದಲ್ಲಿ ಮಾಹಾಮಾರಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ತಮ್ಮ ನೇತೃತ್ವದ ಸರಕಾರ ಕೈಗೊಂಡ ಲಾಕ್‌ಡೌನ್ ಸಮಯೋಚಿತ ಹಾಗೂ ಅವಶ್ಯಕ ನಿರ್ಧಾರದ ಆರಂಭದ ದಿನಗಳಿಂದ ನನ್ನ ಗಮನಕ್ಕೆ ಬಂದಿರುವ ಹಲವು ವಿಷಯಗಳ ಕುರಿತು ಸಲಹೆಗಳ ರೂಪದಲ್ಲಿ ತಮಗೆ ಅನೇಕ ಪತ್ರಗಳನ್ನು ಬರೆದಿದ್ದೇನೆ. ಅವುಗಳಲ್ಲಿ ನಾನು ನೀಡಿರುವ ಬಹುತೇಕ ಸಲಹೆಗಳನ್ನು ತಾವು ಮಾನ್ಯ ಮಾಡಿ ಈಗಾಗಲೇ ಆದೇಶಗಳ ಮೂಲಕ ಜಾರಿಗೊಳಿಸಿದ್ದೀರಿ. ರಾಜ್ಯದ ಎಲ್ಲಾ ಶಿಕ್ಷಕರನ್ನು ಕೋವಿಡ್ ವಾರಿರ‍್ಸ್ ಎಂದು ಘೋಷಿಸುವ ಬಗ್ಗೆ, ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಪ್ಯಾಕೇಜ್ ಪ್ರಕಟಿಸುವ ನನ್ನ ಕೋರಿಕೆಯನ್ನು ತಾವು ಪರಿಗಣಿಸಿ ಈಗಾಗಲೇ ಸೂಕ್ತ ಆದೇಶಗಳ ಮೂಲಕ ಕ್ರಮ ಕೈಗೊಂಡಿದ್ದೀರಿ. ಅಲ್ಲದೇ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಸ್ವಲ್ಪ ಭಾಗ ಅನುದಾನವನ್ನು ಕೋವಿಡ್ ಮೂಲ ಸೌಕರ್ಯ ಒದಗಿಸುವ ಕುರಿತು, ಎಲ್ಲ ಜಿಲ್ಲಾ ಆಸ್ಪತ್ರೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳನ್ನು ಪೂರೈಸುವ ಬಗ್ಗೆ ಹಾಗೂ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ಹಾಗೂ ಔಷಧಿಯನ್ನು ಉಚಿತವಾಗಿ ಒದಗಿಸುವ ಬಗ್ಗೆ ಹೀಗೆ ಹಲವು ಸಲಹೆಗಳನ್ನು ನೀಡಿದ್ದು ಅವುಗಳನ್ನು ತಾವು ಕಾರ್ಯರೂಪಕ್ಕೆ ತಂದಿರುವುದಕ್ಕೆ ನಾನು ತಮಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಕರ್ನಾಟಕ ರಾಜ್ಯ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಹುಬ್ಬಳ್ಳಿ ಇವರು ನನಗೆ ಮನವಿ ನೀಡಿದ್ದು ಎಲ್ಲಾ ಶಿಕ್ಷಕರಿಗೂ ಕೂಡಲೇ ಕೋವಿಡ್ ನಿರೋಧಕ ಲಸಿಕೆ (ವ್ಯಾಕ್ಸಿನ್)ಯನ್ನು ಆದ್ಯತೆ ಮೇರೆಗೆ ನೀಡುವಂತೆ ಆಗ್ರಹಿಸಿದ್ದಾರೆ.

ಈಗಾಗಲೇ ಶಿಕ್ಷಣ ಸಚಿವರು ತಿಳಿಸಿದಂತೆ ಜುಲೈ ೧ರಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಯಾವದೇ ವಯೋಮಿತಿಯ ನಿರ್ಬಂಧವನ್ನು ಅನ್ವಯಿಸದೇ ವಿಶೇಷ ಪ್ಯಾಕೇಜ್‌ನಲ್ಲಿ ಕೋವಿಡ್ ನಿರೋಧಕ ಲಸಿಕೆ (ವ್ಯಾಕ್ಸಿನ್)ಗಳನ್ನು ಕೇಂದ್ರ ಸರಕಾರದಿಂದ ಪಡೆದುಕೊಂಡು ಅತೀ ತುರ್ತಾಗಿ ಎಲ್ಲಾ ಶಿಕ್ಷಕರಿಗೂ ವ್ಯಾಕ್ಸಿನ್ ನೀಡುವಂತಹ ವ್ಯವಸ್ಥೆ ಮಾಡಬೇಕೆಂದು ಕೋರುತ್ತೇನೆ.

ಈ ಕುರಿತು ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೂ ಸದರಿ ಶಿಕ್ಷಕ ಸಂಘ ಸತತವಾಗಿ ಘನ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಾ ಬಂದಿರುತ್ತಾರೆ. ಆದರೆ ವ್ಯಾಕ್ಸಿನ್ ಇಲ್ಲದೇ ಸುಮಾರು ನೂರಾರು ಜನ ಶಿಕ್ಷಕರು ಎರಡನೇ ಅಲೆಗೆ ಸಿಲುಕಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಆದ ಕಾರಣ ಅವರಿಗೆ ಆದ್ಯತೆಯ ಮೇಲೆ ಲಸಿಕೆ ಕೊಟ್ಟು ಜೀವ ಉಳಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ ಎಂಬುದು ನನ್ನ ಭಾವನೆ ಹಾಗೂ ಒತ್ತಾಸೆಯಾಗಿದೆ.

ಖಾಸಗಿ ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ವಿಶೇಷ ಪ್ಯಾಕೇಜ್ ಮೂಲಕ ಸಹಾಯಧನ ಘೋಷಿಸಿರುವ ಸರಕಾರದ ಕ್ರಮವನ್ನು ನಾನು ಸ್ವಾಗತಿಸುತ್ತ ಇದು ಕಡಿಮೆ ಪ್ರಮಾಣದ್ದಾಗಿದ್ದು ಇನ್ನೂ ಹೆಚ್ಚಿನ ಸಹಾಯಧನ ನೀಡಬೇಕೆಂದು ಹಾಗೂ ಶಿಕ್ಷಕರು ಕೋವಿಡ್ ಕೆಲಸದ ಮೇಲಿದ್ದಾಗ ಮೃತಪಟ್ಟರೆ ಅವರ ಅವಲಂಬಿತರೊಬ್ಬರಿಗೆ ಸರಕಾರಿ ನೌಕರಿ ಮತ್ತು ಅವರಿಗೆ ದೊರೆಯಬೇಕಾದ ಪರಿಹಾರಧನವನ್ನು ನೀಡಬೇಕೆಂದು ಈಗಾಗಲೇ ತಮಗೆ ದಿನಾಂಕ: ೦೪-೦೬-೨೦೨೧ ರಂದು ಹುಬ್ಬಳ್ಳಿಯಲ್ಲಿ ತಾವು ಭೇಟಿಯಾದ ಸಮಯದಲ್ಲಿ ಖುದ್ದಾಗಿ ತಿಳಿಸಿರುವದನ್ನು ಹಾಗೂ ಈ ಹಿಂದೆ ಹಲವಾರು ಬಾರಿ ಪತ್ರದ ಮೂಲಕ ತಮ್ಮನ್ನು ಕೋರಿದ್ದನ್ನು ಮತ್ತೊಮ್ಮೆ ತಮಗೆ ನೆನಪಿಸುತ್ತೇನೆ.

ಶಿಕ್ಷಕರು ದೇಶದ ಭದ್ರ ಬುನಾದಿ ಕಾರಣ ಶಿಕ್ಷಕರಿಗೆ ಯಾವುದೇ ವಯೋಮಿತಿಯ ನಿರ್ಬಂಧವನ್ನು ವಿಧಿಸದೇ ಅವರಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿಕೊಂಡಿರುವ ಶಿಕ್ಷಕರ ಬೇಡಿಕೆಯನ್ನು ಸರಕಾರ ಆದ್ಯತೆಯ ಮೇಲೆ ಪರಿಗಣಿಸಿ ಅವರಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕೆಂದು ಈ ಮೂಲಕ ನಾನು ತಮ್ಮನ್ನು ಒತ್ತಾಯಪೂರ್ವಕವಾಗಿ ಪುನಃ ಕೋರುತ್ತೇನೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.