[1]ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮಕ್ಕಳಲ್ಲಿ ಕವಾಸಕಿ ರೋಗ ಕಾಣಿಸಿಕೊಂಡಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿಯೇ ದಾಖಲಾದ 8 ಮಕ್ಕಳಲ್ಲಿ ನಾಲ್ವರು ಮಕ್ಕಳು ಬಲಿಯಾಗಿದ್ದಾರೆ.
ರಾಜ್ಯದ ಎಲ್ಲೆಡೆ ಕವಾಸಕಿ ರೋಗ ಭೀತಿ ಉಲ್ಬಣಿಸಿದ್ದು, ಈ ಕವಾಸಕಿ ರೋಗಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಕಳೆದ 15 ದಿನದಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿಯೇ 8 ಮಕ್ಕಳಲ್ಲಿ ರೋಗ ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡ, ಅಪೌಷ್ಠಿಕತೆ ಸಮಸ್ಯೆ ಇರುವ ಮಕ್ಕಳಲ್ಲಿ ಕವಾಸಕಿ ರೋಗ ಕಾಣಿಸಿಕೊಳ್ಳುತ್ತಿದೆ. ವೈದ್ಯರು ಹೇಳುವ ಪ್ರಕಾರ ಈ ಹಿಂದೆ ತಿಂಗಳಲ್ಲಿ ಒಂದು ಮಗುವಿಗೆ ಈ ಕವಾಸಕಿ ರೋಗ ಕಾಣಿಸಿಕೊಳ್ಳುತಿತ್ತು. ಆದರೆ ಇದೀಗ ನಮ್ಮ ಆಸ್ಪತ್ರೆಗೆ ಪ್ರತಿದಿನ ಒಂದು ಮಗು ಕವಾಸಕಿ ರೋಗಕ್ಕೆ ಚಿಕಿತ್ಸೆ ಪಡೆಯಲು ದಾಖಲಾಗುತ್ತಿದೆ.
ಕೊರೊನಾ ಸೋಂಕು ಕಾಣಿಸಿಕೊಂಡ ನಾಲ್ಕೈದು ವಾರಗಳ ಬಳಿಕ ಈ ರೋಗ ಕಾಣಿಸಿಕೊಳ್ಳುತ್ತಿದೆ. ಕವಾಸಕಿ ರೋಗಕ್ಕೆ ಇಂಜೆಕ್ಷನ್ ಇದ್ದು, ಈ ಇಂಜೆಕ್ಷನ್ ಬೆಲೆ ದುಬಾರಿ ಆಗಿರುವ ಕಾರಣ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಲಭ್ಯತೆ ಇಲ್ಲದಿರುವ ಕಾರಣ ಪೋಷಕರಲ್ಲಿ ಸಹಜವಾಗಿ ಆತಂಕ ಉಂಟು ಮಾಡಿದೆ.
ಆರೋಗ್ಯ ಸಮಸ್ಯೆ ಹೊಂದಿರುವ 8 ರಿಂದ 16 ವರ್ಷದೊಳಗಿನ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕವಾಸಕಿ ರೋಗಕ್ಕೆ 4 ಮಕ್ಕಳು ಬಲಿಯಾಗಿದ್ದಾರೆ.
ಮೂರು ದಿನಕ್ಕಿಂತ ಹೆಚ್ಚು ದಿವಸ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡರೆ ತಕ್ಷಣವೇ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ.
ಕೊರೊನಾ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಮಕ್ಕಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕಿದೆ. ರೋಗ ಕಾಣಿಸಿಕೊಂಡ ಅಂತಿಮ ಹಂತದವರೆಗೆ ಕಾಯದೇ ರೋಗ ಪತ್ತೆಯಾದ ಆರಂಭದಲ್ಲಿಯೇ ವೈದ್ಯರ ಭೇಟಿಯಾಗಿ ಚಿಕಿತ್ಸೆ ಕೊಡಿಸಿದರೇ ಮಕ್ಕಳನ್ನು ಅಪಾಯದಿಂದ ಕಾಪಾಡಿಕೊಳ್ಳಬಹುದಾಗಿದೆ.