[1]ಮಂಗಳೂರು : ನಗರದ ಶಾಲಾ, ಕಾಲೇಜು ಗಳು ವಿದ್ಯಾರ್ಥಿಗಳಿಂದ ಬಲವಂತದ ಫೀಸ್ ಕಲೆಕ್ಷನ್ ಆರಂಭಿಸಿದ್ದು, ಕೇವಲ ಆನ್ ಲೈನ್ ತರಗತಿ ನಡೆಸಿಯೇ ದುಬಾರಿ ಫೀಸ್ ಸಂಗ್ರಹಿಸಿರುವುದು, ಕಳೆದ ಶೈಕ್ಷಣಿಕ ವರ್ಷದ ಕೊರೋನಾ ಆರ್ಥಿಕ ಸಂಕಷ್ಟದ ನಡುವೆ ವರದಿಯಾಗಿದೆ.
ಆರ್ಥಿಕ ಸಂಕಷ್ಟ ಮತ್ತು ಕೊರೋನಾ ಸಾಂಕ್ರಾಮಿಕದ ನಡುವೆ ವಿದ್ಯಾರ್ಥಿಗಳಿಂದ ಅಪಾರ ಫೀಸ್ ಹಣ ಪಡೆದಿರುವುದನ್ನು ಮತ್ತು ಕಳೆದ ವರ್ಷದ ಹಣ ವಸೂಲಾತಿ ಮಾಡಿರುವುದನ್ನು ತನಿಖೆ ಮಾಡಬೇಕು ಎಂದು ಪೋಷಕರು ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ರೀತಿ ಸಂಗ್ರಹ ಮಾಡಿದ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗೆ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟ ಸೂಚನೆ ನೀಡಿದ್ದಾರೆ.
ಕೆಲವು ಶಾಲಾ, ಕಾಲೇಜಿನ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಹೆತ್ತವರ ಬಳಿ ಕಳೆದ ಶೈಕ್ಷಣಿಕ ವರ್ಷದ ಬಾಕಿ ಶುಲ್ಕವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ದೂರವಾಣಿ ಕರೆ ಮಾಡಿ ಒತ್ತಾಯಿಸುವುದು, ಪಾವತಿಸದಿದ್ದರೆ ಆನ್ಲೈನ್ ಪಾಠ ತಡೆಹಿಡಿಯಲಾಗುವುದು ಎಂದು ಎಚ್ಚರಿಸುವುದು, ವರ್ಗಾವಣೆ ಪತ್ರ ಕೊಡುವುದಿಲ್ಲ ಎನ್ನುವುದು, ಲೇಖನ ಸಾಮಗ್ರಿಗಳನ್ನು ನಿರ್ದಿಷ್ಟ ಅಂಗಡಿಗಳಲ್ಲಿ ಮಾತ್ರ ಪಡೆಯಬೇಕು ಎಂದು ಒತ್ತಡ ಹಾಕುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಆ ಹಿನ್ನಲೆಯಲ್ಲಿ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ, ಯಾವ ಕಾರಣಕ್ಕೂ ವಿದ್ಯಾರ್ಥಿಗಳ ಹೆತ್ತವರು, ಪೋಷಕರಲ್ಲಿ ಶುಲ್ಕ ಪಾವತಿಗಾಗಿ ಒತ್ತಡ ಹಾಕಬಾರದು. ಒಂದು ವೇಳೆ ಒತ್ತಡ ಹಾಕಿದ ಬಗ್ಗೆ ದೂರುಗಳು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.