- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಡ್ಡಿಯವನಿಂದ ಸಾಲಪಡೆದು ಕಿರುಕುಳ ತಾಳಲಾರದೆ ಮಹಿಳೆ ಮನೆಯಲ್ಲೇ ಆತ್ಮಹತ್ಯೆ

Gowramma [1]ಶಿವಮೊಗ್ಗ: ಬಡ್ಡಿಯವನಿಂದ ಸಾಲಪಡೆದು  ಮರು ಪಾವತಿಸಿದರೂ  ಕಿರುಕುಳ ತಾಳಲಾರದೆ ಮನನೊಂದ ಮಹಿಳೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಿದ್ಲಿಪುರ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಗೌರಮ್ಮ (55) ಎಂದು ಗುರುತಿಸಲಾಗಿದೆ.

ಗೌರಮ್ಮ ಪತಿ ಮಲ್ಲಿಕಾರ್ಜುನಪ್ಪ ಇದೇ ಗ್ರಾಮದ ಲಂಕೇಶ್ ನಾಯ್ಕ್ ನಿಂದ 10 ರೂ. ಬಡ್ಡಿಯಂತೆ 20 ಸಾವಿರ ರೂ ಸಾಲ ಪಡೆದಿದ್ದರು. ಈ 20 ಸಾವಿರ ರೂ. ಹಣ ನೀಡುವಾಗ ಲಂಕೇಶ್ ನಾಯ್ಕ ಬಡ್ಡಿಯ ಹಣ 2 ಸಾವಿರ ಕಡಿತಗೊಳಿಸಿ ಕೊಟ್ಟಿದ್ದನಂತೆ. ಬಡ್ಡಿ ಕೊಟ್ಟ ನಂತರ 15 ದಿನಕ್ಕೆ ಮತ್ತೆ ಕಾಟ ಕೊಡಲಾರಂಭಿಸಿದ್ದನಂತೆ. ಹೀಗಾಗಿ ಮಲ್ಲಿಕಾರ್ಜುನಪ್ಪ ಲಂಕೇಶ್ ನಾಯ್ಕನಿಗೆ 20 ಸಾವಿರ ಹಣವನ್ನು ಹಿಂತಿರುಗಿಸಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಲಂಕೇಶ್ ನಾಯ್ಕ ಇನ್ನು ಬಾಕಿ ಹಣ 8 ಸಾವಿರ ರೂ. ಕೊಡಬೇಕು ಎಂದು ಪೀಡಿಸುತ್ತಿದ್ದನಂತೆ.

ಅಲ್ಲದೆ ಬಾಕಿ 8 ಸಾವಿರ ರೂ. ಹಣ ನೀಡುವಂತೆ ಗೌರಮ್ಮ ಹಾಗೂ ಮಲ್ಲಿಕಾರ್ಜುನಪ್ಪನಿಗೆ ಗುರುವಾರ ರಾತ್ರಿ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದನಂತೆ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸಾಲದ ಹಣಕ್ಕಾಗಿ ತೊಂದರೆ ಕೊಡಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ ಜಿಲ್ಲಾಡಳಿತದ ಸೂಚನೆ ನಡುವೆಯೂ ವ್ಯಕ್ತಿ ಕಿರುಕುಳ ನೀಡಿದ್ದಾನೆ.

ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಕ್ಕೆ ಮನನೊಂದ ಗೌರಮ್ಮ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ಗೌರಮ್ಮ ಪತಿ ಹಾಗೂ ಆತನ ಮಕ್ಕಳು ತಾಯಿಯ ಸಾವಿಗೆ ಲಂಕೇಶ್ ನಾಯ್ಕನೇ ಕಾರಣ ಎಂದು ಆರೋಪಿಸಿ ದೂರು ನೀಡಲು ಹೋದರೆ ಪೊಲೀಸರು ಸಹ ದೂರು ಸ್ವೀಕರಿಸುತ್ತಿಲ್ಲ. ಜೊತೆಗೆ ಬೈಯ್ದು ಕಳುಹಿಸುತ್ತಿದ್ದಾರೆ ಎಂದು ಮೃತ ಗೌರಮ್ಮ ಪತಿ ಮಲ್ಲಿಕಾರ್ಜುನಪ್ಪ ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ.