ಮಂಗಳೂರು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು, ಕಿನ್ನಿಗೋಳಿಗೆ ಸಂಪರ್ಕ ಕಲ್ಪಿಸುವ ಪಲ್ಗುಣಿ ನದಿ ಸೇತುವೆ ಕುಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಸೇತುವೆಯ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆಗೆ ಹಾನಿಯಾಗಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಸೇತುವೆ ಮಧ್ಯರಾತ್ರಿ 3 ಗಂಟೆಗೆ ಕುಸಿದಿದೆ. ಸೇತುವೆ ಸದ್ಯ ರಸ್ತೆ ಸಂಚಾರಕ್ಕೆ ಸೂಕ್ತವಲ್ಲದ ಕಾರಣ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಉಡುಪಿಯಿಂದ ಬರುವವರು ಮುಲ್ಕಿ, ಕಿನ್ನಿಗೋಳಿ, ಕಟೀಲು, ಬಜ್ಪೆ ಮೂಲಕ ಬರಬಹುದು. ಕಾಸರಗೋಡು, ಮಂಗಳೂರಿನಿಂದ ಬರುವವರು ಕಾವೂರು, ಕುಳೂರು, ಕೆಬಿಎಸ್ ಜೋಕಟ್ಟೆ, ಪೋರ್ಕೋಡಿ, ಬಜಪೆ ಅಥವಾ ಪಚ್ಚನಾಡಿ, ವಾಮಂಜೂರು, ಗುರುಪುರ, ಕೈಕಂಬ, ಬಜಪೆ ಮಾರ್ಗವಾಗಿ ರಸ್ತೆಯಲ್ಲಿ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ನಿಮಿತ್ತ ನೀರಿಗೆ ತಡೆಗೋಡೆ ಕಟ್ಟಿದ್ದರ ಪರಿಣಾಮ ಸೇತುವೆಗೆ ಮಳೆಯ ನೀರಿನ ಒತ್ತಡದಿಂದಾಗಿ ಕುಸಿತ ಸಂಭವಿಸಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಲೋಹಿತ್ ಅಮೀನ್, ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜೊತೆಗಿದ್ದರು.
Click this button or press Ctrl+G to toggle between Kannada and English