[1]ಶಿವಮೊಗ್ಗ: ಕಾಂಗ್ರೆಸ್ ಹೇಳೋರು ಕೇಳೋರು ಇಲ್ಲದ ಪಕ್ಷ ಹಾಗಾಗಿ ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್ ರವರುಗಳು ಪಾಕಿಸ್ತಾನದ ಪರ ಮಾತಾಡ್ತಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆರೋಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಈ ದೇಶದ ಗೋವಿನ ಬಗ್ಗೆ, ದೇಶದ ಭೂಮಿ ಕಾಶ್ಮೀರದ ಬಗ್ಗೆ ಗೌರವವಿಲ್ಲದ ಜನ ಕಾಂಗ್ರೆಸ್ನವರು. ಹೀಗಾಗಿಯೇ ಅವರು ಏನು ಬೇಕಾದರೂ ಹೇಳುತ್ತಾರೆ. ಆದರೆ ಬಿಜೆಪಿಯವರಿಗೆ ಹೇಳೋರು ಕೇಳೋರು ಇದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವುಗಳನ್ನು ಪೂಜೆ ಮಾಡುತ್ತೇವೆ. ಅದೇ ರೀತಿ ಗೋವುಗಳನ್ನು ಹತ್ಯೆಯನ್ನೂ ಮಾಡುತ್ತೇವೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆ ಪರ ಇದ್ದೇವೆ ಎಂದು ಜಮೀರ್ ಅಹಮದ್ ಹೇಳುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370ನ್ನು ರದ್ದು ಮಾಡುತ್ತೇವೆ ಎಂದು ದಿಗ್ವಿಜಯ್ ಸಿಂಗ್ ಹೇಳುತ್ತಾರೆ ಇದು ದಿಗ್ವಿಜಯ್ ಸಿಂಗ್ ಅವರ ರಾಷ್ಟ್ರದ್ರೋಹದ ಹೇಳಿಕೆ ಹಾಗಾಗಿ, ಈ ಮೂರು ಜನ ಪಾಕಿಸ್ತಾನದ ಪರ ಇರುವವರು ಎಂದು ಸಚಿವ ಈಶ್ವರಪ್ಪ ಹೇಳಿದರು.
ಜೂನ್ 16, 17,18ಕ್ಕೆ ರಾಜ್ಯಕ್ಕೆ ಆಗಮಿಸುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಚಿವರ ಜೊತೆ ಹಾಗೂ ಕೋರ್ ಕಮಿಟಿ ಸಮಿತಿ ಸದಸ್ಯರ ಜೊತೆ ಸಭೆ ಮಾಡಲಿದ್ದಾರೆ. ಶಾಸಕರಿಗೂ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ಇದೆ. ಜೊತೆಗೆ ಪಕ್ಷದಲ್ಲಿ ಕೆಲ ಗೊಂದಲಗಳಿವೆ ಆದರೆ ಅರುಣ್ ಸಿಂಗ್ ಬಂದು ಹೋದ ನಂತರ ಎಲ್ಲವೂ ಸರಿಯಾಗುತ್ತದೆ ಎಂದು ತಿಳಿಸಿದರು.