[1]ಮಂಡ್ಯ: ರಾಷ್ಟೀಯ ಉಸ್ತುವಾರಿ ಅರುಣ್ ಸಿಂಗ್ ಆಗಮನದ ಬೆನ್ನಲ್ಲೇ ಬಿ.ಎಸ್ ಯಡಿಯೂರಪ್ಪ ಅವರ ಅಭಿಮಾನಿಗಳು ಅವರ ಸಿಎಂ ಸ್ಥಾನಕ್ಕೆ ಯಾವುದೇ ಕಂಟಕಗಳು ಎದುರಾಗಬಾರದು ಎಂದು ಮಂಡ್ಯದಲ್ಲಿ ಈಡುಗಾಯಿ ಒಡೆದು ಕಾಳಮ್ಮನಿಗೆ ಸೇವೆ ಸಲ್ಲಿಸಿದ್ದಾರೆ.
ಮಂಡ್ಯದ ಕಾಳಮ್ಮ ದೇವಸ್ಥಾನದ ಮುಂಭಾಗ ಪೂಜೆ ಸಲ್ಲಿಸಿ ಎಂಟು ದಿಕ್ಕುಗಳಿಗೂ ಈಡುಗಾಯಿ ಒಡೆದು ಮುಂದಿನ ಎರಡು ವರ್ಷಗಳ ಕಾಲವು ಯಡಿಯೂರಪ್ಪ ಅವರೆ ಸಿಎಂ ಆಗಿ ಮುಂದುವರಿಯಬೇಕೆಂದು ಪ್ರಾರ್ಥನೆ ಮಾಡಿಕೊಂಡರು.
ಬಿ.ಎಸ್ ಯಡಿಯೂರಪ್ಪ ಅವರು ಇಳಿ ವಯಸ್ಸಿನಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಎರಡು ವರ್ಷಗಳು ಅವರೇ ಸಿಎಂ ಆಗಿದ್ರೆ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.
ಇಂದು ರಾಜ್ಯಕ್ಕೆ ಬಂದಿರುವ ಅರುಣ್ ಸಿಂಗ್ ಅವರು ಸಹ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತು ಸಚಿವರು ಮತ್ತು ಶಾಸಕರುಗಳಿಗೆ ಯಡಿಯೂರಪ್ಪ ಅವರಿಗೆ ಸಹಕಾರ ನೀಡುವಂತೆ ಸೂಚನೆ ನೀಡಬೇಕು. ಯಡಿಯೂರಪ್ಪ ಅವರನ್ನು ಸದಾ ದೈವ ಶಕ್ತಿ ಕಾಯುತ್ತಿರಬೇಕೆಂದು ಅಭಿಮಾನಿಗಳು ಪ್ರಾರ್ಥನೆ ಮಾಡಿದರು.