[1]ಮಂಗಳೂರು : ವಿದೇಶದಲ್ಲಿರುವ ರಾಜ್ಯದ ಜನರ ಹಿತದೃಷ್ಟಿಯನ್ನು ಕಾಪಾಡುವ ಸಲುವಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ಅನಿವಾಸಿ ಭಾರತೀಯ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಇದರಲ್ಲಿ ತನಗೆ ಅವಧಿಗಿಂತ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ ಎಂದು ವಿಧಾನ ಪರಿಷತ್ ನೈರುತ್ಯ ಶಿಕ್ಷಕ ಕ್ಷೇತ್ರದ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿದ್ದು ತನ್ನನ್ನು ಇದರ ಉಪಾಧ್ಯಕ್ಷನನ್ನಾಗಿ ಮಾಡಿದೆ. ತನ್ನ ಅಧಿಕಾರವಧಿಯಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ , ಗಲ್ಫ್ ಕನ್ನಡ ವೇದಿಕೆ ಸ್ಥಾಪನೆ, ಕೊಲ್ಲಿ ರಾಷ್ಟ್ರಗಳಲ್ಲಿ ಬಿಸಿನೆಸ್ ಫಾರಂ ಗೆ ಚಿಂತನೆ, ಬೆಂಗಳೂರಿನಲ್ಲಿ ಅಮೇರಿಕ ಕನ್ನಡಿಗರ ಅಮೇರಿಕಕನ್ನಡೋತ್ಸವ ಸಮ್ಮೇಳನ ಆಯೋಜನೆ ಇನ್ನಿತರ ಹಲವು ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದರು. ಪ್ರಪಂಚದ ಸುಮಾರು 118 ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ವಿಶೇಷ ಸಂಬಂಧ ಹಾಗೂ ಅವರ ಮಾಹಿತಿ ಕಲೆ ಹಾಕುವಿಕೆ ಬಹಳ ಕಷ್ಟದ ಕೆಲಸ. ಆದರು ತಾವು ಈ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದೇನೆ ಎಂದವರು ಹೇಳಿದರು.
ರಾಜಗೋಪಾಲ್ ರೈ, ಶ್ರೀಕರ ಪ್ರಭು ಮತ್ತು ನಿತಿನ್ ಕುಮಾರ್ ಪತ್ರಿಕಾಘೋಷ್ಟಿಯಲ್ಲಿ ಉಪಸ್ಥಿತರಿದ್ದರು.