[1]ಬೆಂಗಳೂರು : ರಾಜ್ಯದ ಎಲ್ಲಾ ಜಿಲ್ಲೆಗಳು ಕೋವಿಡ್ 3 ನೇ ಅಲೆಯನ್ನು ಎದುರಿಸಲು ಸನ್ನದ್ಧರಾಗಬೇಕು. ತಕ್ಷಣವೇ ಮಕ್ಕಳ ಆಸ್ಪತ್ರೆಗಳನ್ನು ಸಿದ್ಧಪಡಿಸಬೇಕೆಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಮುಖ್ಯವಾಗಿ ಮಕ್ಕಳಿಗೆ ಚಿಕಿತ್ಸೆ ನೀಡುವ ವೇಳೆ ಪಾಲಕರು ಜೊತೆಗಿರಬೇಕಾಗುತ್ತದೆ. ಹೀಗಾಗಿ ಅವರಿಗೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದೇನೆ”, ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಇಂದು ಕೊರಟಗೆರೆಯಲ್ಲಿ ನೂತನ ಉಪನೋಂದಣಾಧಿಕಾರಿಗಳ ಕಚೇರಿ ಉದ್ಘಾಟಿಸಿ ಮಾತನಾಡಿದ ಸಚಿವರು, “ಪ್ರತಿ ಜಿಲ್ಲೆಯಲ್ಲಿ ಎಲ್ಲಾ ವೈದ್ಯರಿಗೂ ಮಕ್ಕಳಿಗೆ ಚಿಕಿತ್ಸೆ ನೀಡಲು 10 ದಿನದ ಒಳಗಾಗಿ ತರಬೇತಿ ಶಿಬಿರಗಳನ್ನು ನಡೆಸಬೇಕೆಂದು ನಿರ್ದೇಶನ ನೀಡಲಾಗಿದೆ. ವೈದ್ಯರು ಮಕ್ಕಳಿಗೆ ಮಾತೃ ಹೃದಯದಿಂದ ಚಿಕಿತ್ಸೆ ನೀಡಬೇಕು. ಹಾಗಾಗಿ ತರಬೇತಿ ಅವಶ್ಯಕ. ಅದಕ್ಕೆ ಬೇಕಾದ ಹಣವನ್ನು ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಬಿಡುಗಡೆ ಮಾಡಲಾಗಿದೆ. ಹಾಗಾಗಿ ತಕ್ಷಣವೇ ಮಕ್ಕಳ ಆಸ್ಪತ್ರೆಯನ್ನು ಸಿದ್ದಪಡಿಸಿ, ಔಷಧಗಳು, ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ ಹಾಸಿಗೆಗಳನ್ನು ಸಿದ್ಧಪಡಿಸಬೇಕು. ಕೋವಿಡ್ 2ನೇ ಅಲೆಯಿಂದ ಸಾಕಸ್ಟು ಪಾಠಗಳನ್ನು ಕಲಿತಿದ್ದೇವೆ. 3 ನೇ ಅಲೆಯನ್ನು ಎದುರಿಸಲು ಸಿದ್ಧರಾಗಬೇಕಿದೆ”, ಎಂದರು.
[2]“ನಾನು ಕಂದಾಯ ಸಚಿವನಾದ ಮೇಲೆ ಹಲವಾರು ಜನಸ್ನೇಹಿ ಕಾರ್ಯಕ್ರಮ ರೂಪಿಸಿದ್ದೇನೆ. ಹೊಸ ಉದ್ಯಮಗಳ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದ್ದೇವೆ. ಹಳೆಯದಾದ 79ಬಿ ಕಾನೂನಿಗೆ ತಿದ್ದುಪಡಿ ತಂದಿದ್ದೇವೆ. ಇದು ರೈತರಿಗೆ ಬಹಳ ಅನುಕೂಲಕರವಾಗಿದೆ. ಇದರಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳೇ ಜನರಿದ್ದಲ್ಲಿಗೆ ಹೋಗಿ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುವ ನಿಟ್ಟಿನಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಎನ್ನುವ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ನಾನೂ ಕೂಡಾ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳನ್ನ ಅರಿತು ಅಲ್ಲೇ ಬಗೆಹರಿಸುತ್ತಿದ್ದೇನೆ. ಹಿರಿಯ ನಾಗರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಪಿಂಚಣಿ ಹಣವನ್ನು ಮನೆ ಬಾಗಿಲಿಗೆ ತಲುಪಿಸಲು ಎಲ್ಲಾ ತಹಶೀಲ್ದಾರರಿಗೆ ಸೂಚಿಸಿದ್ದೇನೆ”, ಎಂದು ಅಶೋಕ ಹೇಳಿದರು.