[1]ಮಂಗಳೂರು : ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಸುಮಾರು 2 ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ಸುಗಳ ಸಂಚಾರ ಗುರುವಾರ ಆರಂಭಗೊಂಡಿದೆ.
ಸರಕಾರಿ ಬಸ್ಸುಗಳ ಜತೆಗೆ ಗುರುವಾರ ದಿಂದ ಕೆಲವು ಖಾಸಗಿ ಬಸ್ಸುಗಳೂ ರಸ್ತೆಗಿಳಿದಿವೆ. ಆದರೆ ಕೆಲವು ಬಸ್ಸುಗಳಲ್ಲಿ ಬೆರಳೆಣಿಕೆಯ ಪ್ರಯಾಣಿಕರಿದ್ದರೆ, ಮತ್ತೆ ಕೆಲವು ಬಸ್ಸುಗಳ ಆಸನಗಳು ಭರ್ತಿಗೊಂಡು ಸಂಚರಿಸುತ್ತಿವೆ.
ಡೀಸೆಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಬಸ್ಸು ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘ ಹೇಳಿದ್ದು, ಬಸ್ಸಿನ ಕನಿಷ್ಠ ದರವನ್ನು ಈಗಾಗಲೇ 10 ರೂ.ನಿಂದ 12 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ದ.ಕ. ಜಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಗಡಿ ತೆರೆಯಲು ಬಸ್ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಇಂದು ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ಇದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಬಗ್ಗೆ ನಿನ್ನೆ ಹೇಳಿಕೆಯನ್ನೂ ನೀಡಿದ್ದರು.
ಲಾಕ್ಡೌನ್ ವಿನಾಯಿತಿ ಅವಧಿಯ ಬಗ್ಗೆ ಕೊಂಚ ಗೊಂದಲ ವಿರುವುದರಿಂದ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ನಾಳೆಯಿಂದ ಸಂಜೆಯವರೆಗೆ ಲಾಕ್ಡೌನ್ ವಿನಾಯಿತಿ ಮಾಡಿದರೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಇದೆ ಎನ್ನಲಾಗಿದೆ.