[1]ಬೆಂಗಳೂರು : “ಕೋವಿಡ್ ನಮಗೆ ಮಾನವೀಯತೆ ಮಹತ್ವ ಎಷ್ಟು ದೊಡ್ಡದು ಎನ್ನುವ ಪಾಠ ಕಲಿಸಿದೆ. ಈ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ನಾವು ಸಹಾಯ ಮಾಡಬೇಕಿದೆ” ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಇಂದು ಪದ್ಮನಾಭನಗರದ ಕಾರ್ಮೆಲ್ ಸ್ಕೂಲ್ ಆಟದ ಮೈದಾನದಲ್ಲಿ, ಆಟೊ, ಕ್ಯಾಬ್ ಚಾಲಕರು ಮತ್ತು ದಿನಗೂಲಿ ನೌಕರರಿಗೆ ದಿನಸಿ ಕಿಟ್ ವಿತರಿಸಿ, ಮಾತನಾಡಿದ ಸಚಿವರು “ಕೋವಿಡ್ ಸೋಂಕಿತ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮಗನೇ ನಿರಾಕರಿಸಿದ್ದು, ಎಷ್ಟೋ ಜನರು ಅವರ ಮನೆಯವರ ಶವವನ್ನು ಬಿಟ್ಟುಹೋಗಿದ್ದು ಇಂತಹ ಅಮಾನವೀಯ ಸಂಗತಿಗಳನ್ನು ನೋಡಿದ್ದೇವೆ. ಇನ್ನೊಂದೆಡೆ ಆಟೊ, ಕ್ಯಾಬ್, ಆ್ಯಂಬುಲೆನ್ಸ್ ಚಾಲಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜನರಿಗೆ ಸಹಾಯ ಮಾಡಿದ್ದಾರೆ. ಇದು ನಿಜವಾದ ಮಾನವೀಯತೆ” ಎಂದರು.
“ಈ ಭಾಗದಲ್ಲಿ ಹಲವಾರು ವಾಕ್ಸಿನ್ ಕ್ಯಾಂಪ್ ಗಳನ್ನು ಏರ್ಪಡಿಸಿ ಎಲ್ಲ ವರ್ಗದ ಜನರಿಗೆ ವಾಕ್ಸಿನ್ ಸಿಗುವಂತೆ ಮಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಕಾರ್ಯ ಮಾದರಿಯಾದದ್ದು ” ಎಂದು ಆರ್ ಅಶೋಕ ಹೇಳಿದರು.
“ಸಾವಿರಾರು ಜನರ ಶವಗಳನ್ನು ಅವರ ಮನೆಯವರೇ ಭಯದಿಂದ ಅಂತಿಮ ಸಂಸ್ಕಾರ ಮಾಡಿರಲಿಲ್ಲ. ಅವರೆಲ್ಲರ ಶವಗಳ ಅಂತ್ಯಸಂಸ್ಕಾರ ಮಾಡಿ, ಅಸ್ಥಿಗಳನ್ನು ನಾನೇ ಪವಿತ್ರ ಕಾವೇರಿ ಸಂಗಮದಲ್ಲಿ ಬಿಟ್ಟು ಹಿಂದು ಧರ್ಮದ ಅನುಸಾರ ಅವರೆಲ್ಲರ ಕಾರ್ಯ ಮಾಡಿದ್ದೇನೆ. ಯಾಕೆಂದರೆ ಇದು ನನ್ನ ಕರ್ತವ್ಯ. ಇದೆಲ್ಲವೂ ಸಾದ್ಯವಾದದ್ದು ನಿಮ್ಮಿಂದ. ನೀವು ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿದ್ದರಿಂದ ಸಾಧ್ಯವಾಯಿತು” ಎಂದು ಸಚಿವರು ಹೇಳಿದರು.