[1]ಬೆಂಗಳೂರು : ಪದ್ಮನಾಭನಗರ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಕಂದಾಯ ಸಚಿವ ಆರ್ ಅಶೋಕ ಅವರು ಹಾಲು ವಿತರಕರು, ಕೇಬಲ್ ಕಾರ್ಮಿಕರು ಮತ್ತು ಮನೆಕೆಲಸ ಮಾಡುವ ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರ ಕಿಟ್ಗಳನ್ನು ವಿತರಿಸಿದರು.
ಆ ನಂತರದಲ್ಲಿ ಸಚಿವರು ಶಿವಮೊಗ್ಗ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳೊಂದಿಗೆ ರಾಷ್ಟ್ರೀಯ ಭದ್ರತೆ ಕುರಿತ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ, “ರಾಷ್ಟ್ರೀಯ ಭದ್ರತೆ ಎಂಬುದು ಮತದಾನದ ವಿಷಯವಲ್ಲ. ಆದು ನಮಗೆ ಪ್ರಮುಖ ವಿಷಯವಾಗಿದೆ. ರಾಷ್ಟ್ರೀಯ ಭದ್ರತೆ ಎಂಬ ವಿಚಾರ ಬಂದಾಗ ಅದರಲ್ಲಿ ನಾವು ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ಬಿಜೆಪಿ ಪಕ್ಷದ ಬದ್ಧತೆಯಾಗಿದೆ. ಇದಕ್ಕೆ ಅತ್ಯಧಿಕ ಆದ್ಯತೆ ನೀಡಲಾಗುತ್ತದೆ. ಇದನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಬೀತುಪಡಿಸಿದ್ದಾರೆ. ವಾಜಪೇಯಿ ಪ್ರಧಾನಿಯಾದಾಗ, ಭಾರತ ಪರಮಾಣು ರಾಷ್ಟ್ರವಾಯಿತು. ಸರ್ಜಿಕಲ್ ಸ್ಟ್ರೈಕ್ಗಳ ಮೂಲಕವೂ ನಮ್ಮ ಗಡಿಗಳನ್ನು ರಕ್ಷಿಸಲು ನಾವು ಮುಂದಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ದೇಶದ ರಕ್ಷಣೆ ಅತ್ಯಂತ ಆದ್ಯತೆಯ ವಿಷಯವಾಗಿದೆ” ಎಂದು ಹೇಳಿದರು.