ಮಂಗಳೂರು : ಎಂಪಿಎಂಎಲ್ಎ ನ್ಯೂಸ್ ಪತ್ರಿಕೆಯ 12ನೇ ವರ್ಷದ ಸೌಹಾರ್ದ ಸಂಗಮ ಕಾರ್ಯಕ್ರಮದ ಅಂಗವಾಗಿ ನೀಡಲಾಗುವ “ಬೆಸ್ಟ್ ಇಂಜಿನಿಯರ್’ ಅವಾರ್ಡ್” ಪ್ರಶಸ್ತಿಯನ್ನು ಮಂಗಳೂರಿನ ಲೋಕೋಪಯೋಗಿ ಇಲಾಖೆಯ ನಂ. 1 ಉಪವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕೆ.ಟಿ. ಚಂದ್ರಶೇಖರಯ್ಯ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯರವರು ಪ್ರದಾನ ಮಾಡಿದರು.
ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯರವರು ಮಾತನಾಡುತ್ತಾ, MPMLAS NEWS ಪತ್ರಿಕೆ ಕಳೆದ ಹಲವಾರು ವರ್ಷಗಳಿಂದ ಸೌಹಾರ್ದ ಸಂಗಮ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಸಮಾಜದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಆಯ್ದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತೋಷದ ವಿಷಯ.
ಅದರಲ್ಲೂ ಸರ್ಕಾರಿ ಸೇವೆಯಲ್ಲಿರುವ ಹಲವಾರು ವ್ಯಕ್ತಿಗಳು ಅತ್ಯುತ್ತಮ ಸಮಾಜ ಸೇವೆಗಳನ್ನು ನಡೆಸುತ್ತಾ, ಹಲವಾರು ಜನೋಪಯೋಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಎಲೆಮರೆಯ ಕಾಯಿಗಳನ್ನು ಸಹ ಗುರುತಿಸಿ ಸನ್ಮಾನಿಸುತ್ತಿರುವುದು,ಮುನ್ನಲೆಗೆ ತರುತ್ತಿರುವುದು ನಿಜಕ್ಕೂ ಒಂದು ಶ್ಲಾಘನೀಯ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಪತ್ರಿಕೆ ಮುಖೇನ ಇಂತಹ ವ್ಯಕ್ತಿಗಳ ಗುರುತಿಸುವಿಕೆ,ಹಾಗೆ ಇನ್ನಷ್ಟು ಸಮಾಜಮುಖಿ ಸೇವೆಗಳು ಇನ್ನಷ್ಟು ಮುಂದುವರಿಯಲಿ ಎಂದು ಆಶಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರುರವರು ಪತ್ರಿಕೆಯ ಸಂಪಾದಕರಾದ ಡಾ| ಅಶೋಕ್ ಶೆಟ್ಟಿ ಬಿ.ಎನ್. ಇವರು ಹಲವಾರು ವರ್ಷಗಳಿಂದ ಪತ್ರಿಕೆ ನಡೆಸುತ್ತಿದ್ದು, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಹಲವಾರು ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವುದಲ್ಲದೆ,ಸರಕಾರಿ ವ್ಯಕ್ತಿಗಳ ಜನ ಸೇವೆ,ಸಮಾಜ ಸೇವೆಯನ್ನು ಸಹ ಗುರುತಿಸಿ ಸಮಾಜಕ್ಕೆ ಪರಿಚಯಿಸುತ್ತಿದ್ದಾರೆ. ಇದೊಂದು ಉತ್ತಮ ಕಾರ್ಯ, ಎಂದು ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಯೋಗಶಿಕ್ಷಕಿ ಶ್ರೀಮತಿ ಪ್ರಭಾ ಚಂದ್ರಶೇಖರ್, ಪತ್ರಿಕೆಯ ಸಂಪಾದಕ ಡಾ| ಅಶೋಕ್ ಶೆಟ್ಟಿ ಬಿ.ಎನ್. ಅವರು ಉಪಸ್ಥಿತರಿದ್ದರು.
ಪತ್ರಿಕೆಯ 12ನೇ ಸೌಹಾರ್ದ ಸಂಗಮದ ಕಾರ್ಯಕ್ರಮವನ್ನು ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಸರಳವಾಗಿ ಮಂಗಳೂರು ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಕಟ್ಟಡದಲ್ಲಿರುವ ಕುಲಪತಿಯವರ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ವಿದ್ಯಾಧರ್ ಶೆಟ್ಟಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English