[1]ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರ ದರ್ಶನಕ್ಕೆ ಬಂದಿದ್ದ ಭಕ್ತರ ಬ್ಯಾಗೊಂದನ್ನು ಉಪಹಾರ ಸೇವಿಸುತ್ತಿದ್ದ ವೇಳೆ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಅದರಲ್ಲಿ ಸುಮಾರು 17 ಲಕ್ಷ ರೂ. ಮೌಲ್ಯದ ಸ್ವತ್ತುಗಳಿತ್ತು ಎನ್ನಲಾಗಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಗ್ರಾಮದ ಬೈರಲಿಂಗೇನ ಹಳ್ಳಿಯ ಗಂಗಮ್ಮ ಮತ್ತು ಮನೆಯವರು ಜು.20ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಖಾಸಗಿ ವಸತಿಗೃಹದಲ್ಲಿ ಉಳಿದಿದ್ದರು. ಮರು ದಿನ ಬೆಳಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ರಥ ಬೀದಿಯ ಖಾಸಗಿ ಹೋಟೆಲ್ವೊಂದರಲ್ಲಿ ಉಪಹಾರ ಸೇವಿಸಿದ್ದಾರೆ.
ಈ ವೇಳೆ, ಮಹಿಳೆ ತನ್ನ ಬ್ಯಾಗ್ ಅನ್ನು ತನ್ನ ಪಕ್ಕದಲ್ಲಿಯೇ ಇರಿಸಿಕೊಂಡಿದ್ದಾರೆ. ಈ ವೇಳೆ, ಮಹಿಳೆಯ ಬ್ಯಾಗ್ ಅನ್ನು ಖದೀಮನೊಬ್ಬ ಎಗರಿಸಿದ್ದು, ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.