ನವದೆಹಲಿ : ಮಂತ್ರಿ ಮಂಡಲ ವಿಸ್ತರಣೆಯ ಅಂತಿಮ ಪಟ್ಟಿ ಸಿದ್ಧಗೊಂಡಿದ್ದು ನಾಳೆ ಬುಧವಾರ (ಆಗಸ್ಟ್4)ರಂದು 26 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಹೈಕಮಾಂಡ್ ಹೇಳಿದ ತಿದ್ದುಪಡಿಗಳ ಜೊತೆಗೆ ಕೇಂದ್ರ ನಾಯಕರಿಗೆ ಒಲವಿರುವ ಒಂದಷ್ಟು ಮಂದಿಯನ್ನು ಸಚಿವರ ಪಟ್ಟಿಯಲ್ಲಿ ಸೇರಿಸಿ, ಅಂತೂ ಇಂತು ಒಪ್ಪಿಗೆ ಪಡೆದಿದ್ದಾರೆ, ಎರಡು ರಾತ್ರಿ, ಎರಡು ಹಗಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸಿಎಂ ಬೊಮ್ಮಾಯಿ ಅವರು ನೂತನ ಸಚಿವರ ಪಟ್ಟಿಯೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಳಿಕ 9.15ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಯಾಣ ಬೆಳೆಸಲಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಬರುವ ಮುನ್ನವೇ ಡಿಪಿಎಆರ್ ಗೆ ನೂತನ ಸಚಿವರುಗಳ ಹೆಸರುಗಳನ್ನು ಕಳುಹಿಸುವ ಸಾಧ್ಯತೆ ಇದೆ ಅಥವಾ ಸಚಿವಾಕಾಂಕ್ಷಿಗಳು ಸರ್ಕಾರದ ವಿರುದ್ದ ಬಂಡಾಯ ಆಗಬಹುದೆಂದು ಸಚಿವರ ಪಟ್ಟಿಯನ್ನು ಬೆಳಿಗ್ಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಸಿಎಂ ಆಪ್ತ ಮೂಲಗಳು ಹೇಳಿವೆ.
ಯಡಿಯೂರಪ್ಪ ಸಂಪುಟದಲ್ಲಿದ್ದ 8 ಜನ ಹಿರಿಯ ಶಾಸಕರಿಗೆ ಪೈಕಿ ಗೋವಿಂದ ಕಾರಜೋಳ ಹೊಸ ಸಂಪುಟದಲ್ಲಿರಲಿದ್ದಾರೆ ನೂತನ ಮಂತ್ರಿ ಮಂಡಲದಿಂದ ಕೋಟ ಶ್ರೀನಿವಾಸ ಪೂಜಾರಿ, ಲಕ್ಷಣ ಸವದಿ, ವಿ. ಸೋಮಣ್ಣ, ಆರ್. ಶಂಕರ್, ಪ್ರಭು ಚೌಹಾಣ್ ಅವರನ್ನು ಸಚಿವ ಸ್ಥಾನದಿಂದ ಇಳಿಸಲಾಗಿದೆ ಎಂದು ಹೇಳಲಾಗಿದೆ. ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದ ಶ್ರೀರಾಮುಲುಗೆ ಮತ್ತೆ ನಿರಾಸೆ ಯಾಗಿದೆ ಎನ್ನಲಾಗಿದೆ.
ಇದೆಲ್ಲದರ ನಡುವೆ ಸ್ನೇಹಿತನನ್ನು ಸಂಪುಟಕ್ಕೆ ತೆಗೆದುಕೊಂಡ ಸಿಎಂ ಬೊಮ್ಮಾಯಿ ಅವರು ಆರ್. ಅಶೋಕ್ ಗೆ ಸಚಿವ ಸ್ಥಾನ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೂತನ ಸಚಿವರ ಪಟ್ಟಿ ಹಿಡಿದುಕೊಂಡು ಬೆಂಗಳೂರು ತಲುಪಿದ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನೂತನ ಸಚಿವರಿಗೆ ಖುದ್ದು ಕರೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
Click this button or press Ctrl+G to toggle between Kannada and English