[1]ಚಿಕ್ಕಮಗಳೂರು: ಮನೆಯ ಗಂಡಸರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಮತ್ತು ಓರ್ವ ಯುವತಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಮಕ್ಕಿಮನೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶಾರದಮ್ಮ(70), ವೀಣಾ(49) ಹಾಗೂ ಶ್ರಾವ್ಯ(16) ಎಂದು ಗುರುತಿಸಲಾಗಿದೆ.
ಮೃತ ವೀಣಾ ಶೃಂಗೇರಿಯ ಹೊನ್ನವಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಅಂಗನವಾಡಿಗೆ ತೆರಳದ ಹಿನ್ನೆಲೆಯಲ್ಲಿ ಅಂಗನವಾಡಿ ಸಹಾಯಕಿ ಪೂರ್ಣಿಮಾ, ವೀಣಾಗೆ ಕರೆ ಮಾಡಿದ್ದಾರೆ. ಅವರು ಫೋನ್ ಸ್ವೀಕರಿಸಿಲ್ಲ. ಆಗ ಪೂರ್ಣಿಮಾ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಿಯರು ಅವರ ಮನೆ ಬಳಿ ಹೋದಾಗ ಬಾಗಿಲು ಹಾಕಿತ್ತು. ಬಾಗಿಲು ಬಡಿದರೂ ಯಾರೂ ತೆಗೆಯದ ಹಿನ್ನೆಲೆ ಮನೆಯ ಹಂಚು ತೆಗೆದು ನೋಡಿದಾಗ ಮೂವರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಮೂವರು ಆತ್ಮಹತ್ಯೆಗೆ ಶರಣಾಗಲು ಕೌಟುಂಬಿಕ ಕಲಹವೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೂವರು ಸಾವಿಗೆ ಶರಣಾದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮೃತ ವೀಣಾ ಗಂಡ ಕೆಲಸಕ್ಕೆ ಹೋದಾಗ ಮನೆಯಲ್ಲಿ ಮೂವರೇ ಇದ್ದರು. ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ ಒಬ್ಬರ ಪಕ್ಕದಲ್ಲಿ ಒಬ್ಬರು ಮೂವರು ನೇಣಿಗೆ ಶರಣಾಗಿದ್ದಾರೆ. ಮೃತ ಶ್ರಾವ್ಯ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು.
ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.