[1]ಬೆಂಗಳೂರು : ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಹಳ ದುಃಖದ ದಿನ. ನಮ್ಮ ಹಿರಿಯ ನಾಯಕರಾದ, ಹಾಲಿ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಉಡುಪಿ ಪಾಲಿಕೆ ಸದಸ್ಯರಾಗಿ ರಾಜಕಾರಣ ಪ್ರಾರಂಭಿಸಿ ಸತತ ನಾಲ್ಕು ಬಾರಿ ಸಂಸತ್ ಸದಸ್ಯರಾಗಿ, ಕೇಂದ್ರದ ಮಂತ್ರಿಯಾಗಿ, ನಂತರ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು ಸಸ್ಯಹಾರಿಗಳು. ನಿತ್ಯ ಕನಿಷ್ಠ ಒಂದೂವರೆ ಗಂಟೆ ಯೋಗ ಮಾಡುತ್ತಿದ್ದರು. ಆರೋಗ್ಯದ ಮೇಲೆ ಅಷ್ಟು ಕಾಳಜಿ ಹೊಂದಿದ್ದ ಇಂತಹ ನಾಯಕರನ್ನು ದೇವರು ಇಷ್ಟು ಬೇಗ ಯಾಕೆ ಕರೆಸಿಕೊಂಡರು ಎಂಬ ಪ್ರಶ್ನೆ ಮೂಡುತ್ತದೆ.
ಅವರು ಮಂತ್ರಿಯಾಗಿರಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿದ್ದಾಗಲೂ ಬೆಳಗ್ಗಿನ ಜಾವ 3 ರವರೆಗೂ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿ, ಧೈರ್ಯ ತುಂಬುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರೇ ಅವರ ಆಸ್ತಿಯಾಗಿದ್ದರು. ತಾನು ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಅವರು ಯಾವತ್ತೂ ತೋರಿಸಿಕೊಂಡಿರಲಿಲ್ಲ.
ಅವರು ಪಕ್ಷವನ್ನು ಕಷ್ಟಕಾಲದಲ್ಲಿ ಕಟ್ಟಿದ್ದಾರೆ. ರಾಷ್ಟ್ರದ ಉದ್ದಗಲಕ್ಕೂ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ನೂರಾರು ನಾಯಕರನ್ನು ಬೆಳೆಸಿದ್ದಾರೆ. ಅವರು ಯಾರೇ ಬಂದರೂ ತಾಳ್ಮೆಯಿಂದಲೇ ಮಾತನಾಡಿ, ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ಅವರು ನಡೆದು ಬಂದ ಹಾದಿ ಬಗ್ಗೆ ಮಾತಾಡಲು ಗಂಟೆಗಟ್ಟಲೇ ಸಮಯ ಬೇಕು. ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಮತ್ತಿತರರು ಅವರು ಆಸ್ಕರ್ ಫರ್ನಾಂಡೀಸ್ ಅವರ ಭಾವಚಿತ್ರಕ್ಕೆ ಪುಷ್ಪ, ನುಡಿನಮನ ಸಲ್ಲಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಧೃವನಾರಾಯಣ್, ಸಲೀಂ ಅಹಮದ್, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಅಲ್ಲಂ ವೀರಭದ್ರಪ್ಪ, ತುಕರಾಂ, ಪಿ.ಟಿ. ಪರಮೇಶ್ವರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.