[1]ಬೆಂಗಳೂರು : “ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಆರ್ ಎಸ್ ಎಸ್ ಅನ್ನು ಟೀಕಿಸುವುದು ತಪ್ಪು. ಎಲ್ಲವನ್ನು ತಿಳಿದುಕೊಂಡು ಮಾತನಾಡಬೇಕು”, ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಆರೆಸ್ಸೆಸ್ ಒಂದು ದೇಶಭಕ್ತ ಸಂಘಟನೆ. ಸೇವೆಯೆ ಅದರ ಮೂಲಮಂತ್ರ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಬಂಧಿತರಾದವರು ಶೇಕಡ 80 ರಷ್ಟು ಜನ ಆರ್ಎಸ್ಎಸ್ ಗೆ ಸೇರಿದವರು. ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡುವಲ್ಲಿ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಆರ್ಎಸ್ಎಸ್ ಮುಂಚೂಣಿಯಲ್ಲಿತ್ತು. ಎಚ್ಡಿ ಕುಮಾರಸ್ವಾಮಿಯವರು ತಪ್ಪು ಕಲ್ಪನೆಯಲ್ಲಿದ್ದಾರೆ. ನಾನು ಸಹ ಆರ್ಎಸ್ಎಸ್ನಿಂದ ಬಂದಿದ್ದೇನೆ. ಪ್ರಧಾನಮಂತ್ರಿ ಸನ್ಮಾನ್ಯ ಮೋದಿಯವರು ಮತ್ತು ಗೃಹ ಸಚಿವ ಅಮಿತ್ ಶಾ ಕೂಡ ಆರ್ಎಸ್ಎಸ್ ನಿಂದಲೇ ಬಂದವರು. ಆರ್ ಎಸ್ ಎಸ್ ದೇಶ ಕಟ್ಟುವ ಸಂಸ್ಥೆ. ಎಂದೂ ಸಹ ರಾಜಕೀಯ ಮಾಡುವದಿಲ್ಲ. ಎಲ್ಲರೂ ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುತ್ತಾರೆ. ಕಾರಣ ಆರ್ ಎಸ್ ಎಸ್ ಯಾವುದಕ್ಕು ಪ್ರತ್ಯುತ್ತರ ನೀಡುವದಿಲ್ಲ. ಇವರೆಲ್ಲ ಮೊದಲು ಆರ್ ಎಸ್ ಎಸ್ ಸಿದ್ದಾಂತ, ಸೇವೆ, ದೇಶಭಕ್ತಿ ಇವುಗಳ ಬಗ್ಗೆ ತಿಳಿದು ಮಾತನಾಡುವುದು ಉತ್ತಮ” ಎಂದರು.
“ಮಳೆಯಿಂದ ಆಗುವ ತೊಂದರೆಗೆ ರಕ್ಷಣಾ ಪ್ರಯತ್ನಗಳು ಭರದಿಂದ ಸಾಗಿವೆ. ಬೆಂಗಳೂರಿನಲ್ಲಿ ಮಳೆ ಸಂಬಂಧಿತ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವ ಕುರಿತು ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಅವರೊಂದಿಗೆ ಮಾತನಾಡಿದ್ದೇನೆ. ಈ ವರ್ಷ ಬೆಂಗಳೂರು ನಗರದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಾರೀ ಮಳೆಯಾಗಿದೆ. ಆದ್ದರಿಂದ, ಮಳೆಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ತಕ್ಷಣವೇ ಪರಿಹರಿಸುವ ನಿಟ್ಟಿನಲ್ಲಿ ವಾಹನಗಳು ಮತ್ತು ಸಿಬ್ಬಂದಿಯನ್ನು ಒದಗಿಸುವ ಮೂಲಕ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ತಂಡಗಳನ್ನು ರಚಿಸಿದ್ದೇವೆ” ಎಂದು ಅಶೋಕ ಹೇಳಿದರು.