[1]ಉಪ್ಪಿನಂಗಡಿ : ರಸ್ತೆ ದಾಟುತ್ತಿದ್ದ ತಾಯಿ-ಮಗು ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಮೃತಪಟ್ಟವರು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಎಂಬಲ್ಲಿನ ಸಿದ್ದೀಕ್ ಎಂಬುವರ ಪತ್ನಿ ಶಾಹಿದಾ (25) ಹಾಗೂ ಅವರ ಒಂದು ವರ್ಷದ ಪುತ್ರ ಶಾಹೀಲ್ ಎಂದು ಗುರುತಿಸಲಾಗಿದೆ.
ಶಾಹಿದಾ ಅವರು ಗೇರುಕಟ್ಟೆಯ ತಾಯಿ ಮನೆಯಿಂದ ಇಂದು ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ ಮಗುವಿನೊಂದಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ, ಕೆಎಸ್ಆರ್ಟಿಸಿ ಬಸ್ಸೊಂದು ನಿಲ್ದಾಣದ ಬಳಿ ತಿರುಗುತ್ತಿದ್ದು, ಅಲ್ಲೇ ಇರುವ ನಂದಿನಿ ಹಾಲಿನ ಬೂತ್ ಕಡೆಯಿಂದ ಮತ್ತೊಂದು ಕಡೆಗೆ ಶಾಹಿದಾ ಅವರು ಮಗುವಿನೊಂದಿಗೆ ರಸ್ತೆ ದಾಟುತ್ತಿದ್ದರು. ಈ ವೇಳೆ ತಾಯಿ-ಮಗುವಿನ ಮೇಲೆಯೇ ಬಸ್ ಹರಿದಿದಿದೆ. ಪರಿಣಾಮ, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಸ್ಗಳ ಟ್ರಿಪ್ ಪೈಪೋಟಿಯಿಂದ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಆರೋಪಿಸಿ, ಸ್ಥಳದಲ್ಲಿ ಜನರು ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದರು.