[1]ಮಂಗಳೂರು : ಕಳೆದ ಎರಡು ವರ್ಷಗಳಿಂದ ಗಂಡನೊಂದಿಗೆ ಜೀವನ ನಡೆಸಬೇಕು ಎಂದು ಹೋರಾಟ ಮಾಡುತ್ತಿದ್ದ ಮಹಿಳೆ ಗಂಡನಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಹೋರಾಟದಿಂದ ಹಿಂದೆ ಸರಿದು ತನ್ನಿಷ್ಟದಂತೆ ಜೀವಿಸಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ.
ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರ ಗೊಂಡ ಬಳಿಕ ಆತ ಆಕೆಯನ್ನು ಬಿಟ್ಟುಬಿಟ್ಟಿದ್ದಾನೆ.
ಸುಳ್ಯದ ಕಟ್ಟೆಕ್ಕಾರ್ಸ್ ಕುಟುಂಬದ ಇಬ್ರಾಹಿಂ ಖಲೀಲ್ ಎಂಬವ ಕೇರಳದ ಕಣ್ಣೂರಿನ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಎಂಬ ಯುವತಿಯನ್ನು ಮದುವೆಯಾಗಿದ್ದನು. ಯುವತಿ ಮತಾಂತರವಾದ ಬಳಿಕ ಹೆಸರನ್ನು ಬದಲಿಸಿ ಆಸಿಯಾ ಎಂದು ಇಟ್ಟುಕೊಂಡಿದ್ದರು. ಮದುವೆಯಾಗಿ ಕೆಲ ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿ ಇಬ್ಬರು ಪರಸ್ಪರ ಬೇರೆಯಾಗಿದ್ದರು. ಕಾನೂನು ಹೋರಾಟವೂ ಆರಂಭವಾಗಿತ್ತು.
ಇವರಿಬ್ಬರಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿತ್ತು. ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಮದುವೆ ವಿಚಾರ ಪ್ರಸ್ತಾಪವಾದಾಗ ವಿವಾಹಕ್ಕೂ ಮುನ್ನ ಮತಾಂತರ ಆಗಬೇಕೆಂಬ ಷರತ್ತನ್ನು ಖಲೀಲ್ ವಿಧಿಸಿದ್ದ. ಅದರಂತೆಯೇ ಮತಾಂತರಗೊಂಡು 2017ರಲ್ಲಿ ಶಾಂತಿ ಜೂಬಿ ಪತಿಯನ್ನು ಬಿಟ್ಟು, ಇಬ್ರಾಹಿಂ ಖಲೀಲ್ ಜತೆ ನಿಖಾ ಆಗಿದ್ದಳು. ಬೆಂಗಳೂರಿನಲ್ಲಿ ಇಬ್ಬರ ನಿಖಾ ನೆರವೇರಿತ್ತು. ಮತಾಂತರ ಬಳಿಕ ಶಾಂತಿ ಜೂಬಿ ಆಸಿಯಾ ಆಗಿ ಹೆಸರು ಬದಲಾಯಿಸಿಕೊಂಡಳು. ಬೆಂಗಳೂರಿನಲ್ಲೇ ಆಸಿಯಾ ವಾಸವಿದ್ದಳು. ಖಲೀಲ್ ಸಹ ಬಂದು ಹೋಗುತ್ತಿದ್ದ. ಆಸಿಯಾ ಕೂಡ ಸುಳ್ಯಕ್ಕೆ ಹೋಗಿ ಬರುತ್ತಿದ್ದಳು. ಆರಂಭದಲ್ಲಿ ಸಂಸಾರದ ಬಂಡಿ ಸುಖವಾಗೇ ಸಾಗುತ್ತಿತ್ತು. ಆದರೆ, ಒಮ್ಮೆ ಇದ್ದಕ್ಕಿದ್ದಂತೆ ಪತಿ ಎಸ್ಕೇಪ್ ಆಗಿದ್ದ.
ಆ ಬಳಿಕ ಗಂಡನೊಂದಿಗೆ ಜೀವನ ನಡೆಸಲು ಹೋರಾಟ ನಡೆಸಿ ಸೋತು ಮಹಿಳೆ ತನ್ನಿಷ್ಟದಂತೆ ಜೀವಿಸಲು ತೀರ್ಮಾನಿಸಿದ್ದಾರೆ, ಮುಂದಿನ ದಿನಗಳಲ್ಲಿ ನನ್ನ ಯಾವುದೇ ವಿಷಯಕ್ಕೆ ಇಬ್ರಾಾಹಿಂ ಮತ್ತು ಅವರ ಕುಟುಂಬಕ್ಕೆ ಯಾವುದೇ ಸಂಬಂಧ ಇರುವುದಿಲ್ಲ. ಅವರ ಪರವಾಗಿ ಅಥವಾ ವಿರುದ್ಧವಾಗಿ ನಾನು ಯಾವುದೇ ಹೇಳಿಕೆಯನ್ನು ಸಾಮಾಜಿಕ ಜಾಲತಾಣ, ಮಾಧ್ಯಮದಲ್ಲಿ ನೀಡುವುದಿಲ್ಲ. ನಮ್ಮ ನಡುವೆ ಈ ಮೊದಲು ಪೊಲೀಸ್ ಠಾಣೆಯಲ್ಲಿ ಮತ್ತು ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವನ್ನು ನನ್ನ ಇಚ್ಛೆಯಂತೆ ಹಿಂಪಡೆಯುತ್ತಿದ್ದೇನೆ ಎಂದು ತಿಳಿಸಿದರು. ಷರೀಯತ್ ಕಾನೂನಿನ ಪ್ರಕಾರ ನಾನು ವಿವಾಹವಾಗಿದ್ದು, ಮುಂದೆ ನನ್ನಂತಹ ನೊಂದ ಮಹಿಳೆಯರಿಗೆ ನೆರವು ನೀಡಲು ಮುಂದಾಗುತ್ತೇನೆ ಎಂದಿದ್ದಾರೆ.