- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಗರದ ಕುಂಟಿಕಾನ ಬಳಿ ರಸ್ತೆ ಅಪಘಾತ ಬೈಕ್‌ ಸವಾರನ ಸಾವು

Jeep bike accident [1]ಮಂಗಳೂರು : ಕುಂಟಿಕಾನ ಎ.ಜೆ. ಆಸ್ಪತ್ರೆ ಬಳಿ ರವಿವಾರ ಜೀಪೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಗಾಯ ಗೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ಕೋಡಿಕಲ್ ಕಲ್ಪಣೆ ನಿವಾಸಿ ನಾರಾಯಣ ಎಂಬವರ ಪುತ್ರ ಕರುಣಾಕರ್ ಎಂಬುವವರಾಗಿದ್ದಾರೆ.

ನಿನ್ನೆ ಸಂಜೆ ಕದ್ರಿಯಿಂದ ಕೋಡಿಕಲ್‌ನತ್ತ ಪಲ್ಸರ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಮಹೇಂದ್ರ ಜೀಪೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ವಿರುದ್ಧ ದಿಕ್ಕಿಗೆ ತಿರುಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಕರುಣಾಕರ್ ರಸ್ತೆಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಕೂತಿದ್ದ ಸಂದೀಪ್ ಗಾಯಗೊಂಡಿದ್ದಾರೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿ, ಮೃತನ ಜೇಬಿನಲ್ಲಿದ್ದ ಗುರುತಿನ ಚೀಟಿ ಮತ್ತು ಗಾಯಾಳು ನೀಡಿದ ಮಾಹಿತಿಯಾಧಾರದಲ್ಲಿ ಕೇಸು ದಾಖಲಿಸಿದ್ದಾರೆ.