[1]ಮಂಗಳೂರು : ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜ್ವೊಂದರಲ್ಲಿ ಎಂಬಿಬಿಎಸ್ ಇಂಟರ್ನ್ ಶಿಪ್ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ಕುತ್ತಾರು ಪದವಿನಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಆನಂದ ನಗರ ನಿವಾಸಿ ವಿಜಯಕುಮಾರ್ ಗಾಯಕ್ ವಾಡ್ ಎಂಬವರ ಪುತ್ರಿ ವೈಶಾಲಿ ಗಾಯಕ್ ವಾಡ್ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.
ಶನಿವಾರ ರಾತ್ರಿ ಈಕೆ ತನ್ನ ಸಹಪಾಠಿ ಜತೆ ಮಾತನಾಡಿದ್ದನ್ನು ಮತ್ತು ಇಬ್ಬರೂ ಪ್ರತ್ಯೇಕ ರೂಮ್ನಲ್ಲಿ ಮಲಗಿದ್ದನ್ನು ಅಪಾರ್ಟ್ಮೆಂಟ್ನ ಇತರರು ಕಂಡಿದ್ದಾರೆ. ಆದರೆ ರವಿವಾರ ಬೆಳಗ್ಗೆ 10 ಗಂಟೆಯಾದರೂ ವೈಶಾಲಿ ತನ್ನ ರೂಮಿನಿಂದ ಹೊರಬಾರದ ಕಾರಣ ಆತಂಕಕ್ಕೊಳಗಾದ ಸಹಪಾಠಿಯು ರೂಮಿಗೆ ತೆರಳಿ ನೋಡಿದಾಗ ವೈಶಾಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೂರಲಾಗಿದೆ.
ಈಕೆ ತನ್ನ ಸಹಪಾಠಿ ಜತೆ ಕುತ್ತಾರುವಿನಲ್ಲಿರುವ ಸಿಲಿಕಾನ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದು, ಮೆಡಿಕಲ್ ಕಲಿಯುತ್ತಿರುವ ಕೇರಳದ ಪಾಲಕ್ಕಾಡ್ ಮೂಲದ ವಿದ್ಯಾರ್ಥಿಯೊಬ್ಬನನ್ನು ವೈಶಾಲಿ ಪ್ರೀತಿಸುತ್ತಿದ್ದು, ಇವರ ನಡುವಿನ ಭಿನ್ನಾಭಿಪ್ರಾಯ ಆತ್ಮಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಉಳ್ಳಾಲ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.