[1]ಮಂಗಳೂರು: ಆರೋಗ್ಯವಂತ ಹಾಗೂ ಸದೃಢವಾಗಿದ್ದ 9 ವರ್ಷ ಪ್ರಾಯದ ಹುಲಿಯೊಂದು ಮಂಗಳವಾರ ಮುಂಜಾನೆ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಮೃತಪಟ್ಟಿದೆ.
ಮುಂಜಾನೆವರೆಗೂ ಚುರುಕಾಗಿಯೇ ಇದ್ದು ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದೆ. ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಮಾಡಿದ ಪ್ರಯತ್ನ ಫಲಪ್ರದವಾಗಲಿಲ್ಲ.
ಈ ಹುಲಿಯ ಹೆಸರು ಒಲಿವರ್. ಇದು ವಿಕ್ರಂ ಹಾಗೂ ಶಾಂಭವಿ ಹುಲಿ ಜೋಡಿಗೆ ಜನಿಸಿದ್ದ ಎರಡು ಮರಿಗಳಲ್ಲೊಂದು. ಇದರ ಪ್ರಾಯ 9 ವರ್ಷ ಆಗಿತ್ತು. ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ ಹಾಗೂ ಪಶು ಜೈವಿಕ ಶಾಸ್ತ್ರ ಸಂಸ್ಥೆ ಹಾಗೂ ಉತ್ತರ ಪ್ರದೇಶದ ಭಾರತೀಯ ಪಶು ಸಂಶೋಧನಾ ಸಂಸ್ಥೆಗೆ ಕಳುಹಿಸಿ ಕೊಡಲಾಗಿದೆ.
ಕೋವಿಡ್ ಪರೀಕ್ಷೆಗಾಗಿ ಮಾದರಿಯನ್ನು ಭೋಪಾಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯರಿಟಿ ಎನಿಮಲ್ ಡಿಸೀಸಸ್ಗೆ ಕೂಡಾ ಕಳುಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ರೋಗ ಹರಡದಂತೆ ರೋಗ ನಿರೋಧಕ ದ್ರಾವಣವನ್ನು ಪ್ರಾಣಿಗಳ ಆವರಣದ ಸುತ್ತಮುತ್ತ ಸಿಂಪಡಿಸಲಾಗುತ್ತಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಚ್.ಜೆ.ಭಂಡಾರಿ ತಿಳಿಸಿದ್ದಾರೆ.