[1]ಧರ್ಮಸ್ಥಳ : ಮರಳು ಸಾಗಾಣಿಕೆ ಲಾರಿ ಮಾಲೀಕರಿಂದ ಹಣ ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದೇನೆ ಎಂದು ಶಾಸಕ ಹರತಾಳು ಹಾಲಪ್ಪ ಮಾಧ್ಯಮಗಳಿಗೆ ತಿಳಿಸಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆರೋಪ ಹಾಗೂ ಆಹ್ವಾನದ ಹಿನ್ನೆಲೆ, ಸವಾಲು ಸ್ವೀಕರಿಸಿದ ಶಾಸಕ ಹರತಾಳು ಹಾಲಪ್ಪ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿ ಮಾತನಾಡಿದರು.
ಮಾಜಿ ಶಾಸಕರ ಆಹ್ವಾನದಂತೆ ಆರು ದಿನಗಳ ಮೊದಲೇ ಅವರಿಗೆ ತಿಳಿವಳಿಕೆ ಪತ್ರದ ಮೂಲಕ ನೋಟಿಸ್ ನಿಡಿ ಇಂದಿಗೆ ದಿನ ನಿಗದಿಪಡಿಸಲಾಗಿತ್ತು. ಅವರು ದಿನಾಂಕ ಹಾಗೂ ಸಮಯ ಬದಲಾವಣೆ ಪ್ರಯತ್ನದ ಮೂಲಕ ಜಾರಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೂ ಇಂದು ಅವರು ಧರ್ಮಸ್ಥಳಕ್ಕೆ ಆಗಮಿಸುವ ಮಾಹಿತಿ ಲಭಿಸಿದೆ ಎಂದು ಬೇಳೂರು ಗೋಪಾಲಕೃಷ್ಣ ಆಗಮನಕ್ಕೂ ಮುನ್ನ ಈ ಹೇಳಿಕೆ ನೀಡಿದರು.
ನಾನು ಹಣ ಪಡೆಯದಿರುವ ಕುರಿತು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದೇನೆ. ಆದರೆ, ಅವರಿಗೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ತಾಕತ್ತಿಲ್ಲ. ನಾನು ಹಣ ಪಡೆದ ಕುರಿತು ಯಾವುದೇ ದಾಖಲೆಗಳಿದ್ದರೆ ನನ್ನ ವಿರುದ್ಧ ಕೇಸ್ ಹಾಕಲಿ ಎಂದು ಸವಾಲು ಹಾಕಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಆಪಾದನೆ ಮಾಡಿದ ಹಿನ್ನೆಲೆ, 40 ವರ್ಷಗಳಿಂದ ಸ್ನೇಹಿತರಾಗಿರುವ ವಿನಾಯಕ ರಾವ್ ಮತ್ತು ಅಣ್ಣಯ್ಯನ ಮಗ ರವೀಂದ್ರ ಅವರನ್ನೂ ಜೊತೆಗೆ ಕರೆದುಕೊಂಡು ಬಂದು ಪ್ರಮಾಣ ಮಾಡುವ ಮೂಲಕ ದೇವರ ಸಮ್ಮುಖದಲ್ಲಿ ನನ್ನ ಪ್ರಾಮಾಣಿಕತೆಯನ್ನು ತಿಳಿಸಿದ್ದೇನೆ ಎಂದರು.
ಶಾಸಕ ಹರತಾಳು ಹಾಲಪ್ಪ ಅವರ ವಿರುದ್ಧ ಮರಳು ದಂಧೆಯಿಂದ ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದೆ. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಹೇಳಿದ್ದೆ. ಅದಲ್ಲದೇ ದುಡ್ಡು ಕೊಟ್ಟವರೂ ಕೂಡ ನನ್ನೊಟ್ಟಿಗೆ ಇದ್ದಾರೆ. ಇದು ನೂರಕ್ಕೆ ನೂರು ಸತ್ಯ. ಅವರು ಸುಮಾರು 300 ಲಾರಿ ಮಾಲೀಕರಿಂದ ಹಣ ಪಡೆದಿದ್ದಾರೆ. ಅದರಲ್ಲಿ 30 ಜನ ಅವರ ಪರವಾಗಿ ಸಾಕ್ಷಿ ನೀಡಬಹುದು ಎಂದರು.