- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚುಟುಕು ಸಾಹಿತ್ಯದ ಸಾಮರ್ಥ್ಯ ದೊಡ್ಡದು’ – ಧರ್ಮದರ್ಶಿ ಹರಿಕೃಷ್ಣ ಪುನರೂರು

chutuku [1]
ಬಂಟ್ವಾಳ : ‘ಕಿರಿದರೊಳ್ ಪಿರಿದರ್ಥ ಕೊಡುವ ಚುಟುಕು ಬರೆಯುವುದು ಸುಲಭದ ವಿಷಯವಲ್ಲ. ಧಾವಂತದ ಸಮಾಜಕ್ಕೆ ಕೆಲವೇ ಕ್ಷಣಗಳಲ್ಲಿ ಓದಲು ಅನುಕೂಲ ಆಗುವ ಚುಟುಕುಗಳ ಸಾಮರ್ಥ್ಯ ವಿಶಿಷ್ಟವಾದದ್ದು.ಕೃತಿಗಳನ್ನು ಕೊಂಡು ಓದುವ ಔದಾರ್ಯ ಹೆಚ್ಚಾಗಬೇಕು.’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಅವರು ಮಂಗಳವಾರ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಇವರ ಸಹಯೋಗದಲ್ಲಿ ನಡೆದ ಹಿರಿಯ ಸಾಹಿತಿ ಇರಾ ನೇಮು ಪೂಜಾರಿಯವರ ‘ಚುಟುಕು ಕಣಜ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರು ವಹಿಸಿದ್ದರು. ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಸಂಚಾಲಕರಾದ ಡಾ.ಎಂ.ಜಿ.ಆರ್ ಅರಸ್ ಅವರು ಚುಟುಕು ಕಣಜ ಕೃತಿ ಲೋಕಾರ್ಪಣೆ ಮಾಡಿ ‘ ಡಿವಿಜಿ, ಚೆನ್ನವೀರ ಕಣವಿ, ದೇಜಗೌ ಮೊದಲಾದ ಕನ್ನಡ ಹಿರಿಯ ಸಾಹಿತಿಗಳು ನೆಚ್ಚಿಕೊಂಡ ಸಾಹಿತ್ಯ ಪ್ರಕಾರ ಚುಟುಕು ಸಾಹಿತ್ಯ. ಸಾಮಾಜಿಕ ಜೀವನದ ಚಲನವಲನಗಳ ಮೇಲೆ ಬೆಳಕು ಚೆಲ್ಲುವ ಪ್ರಬುದ್ಧ ಪ್ರಯತ್ನಗಳು ಚುಟುಕು ಸಾಹಿತಿಗಳಿಂದ ನಡೆದಿದೆ. ಪ್ರತಿಯೊಬ್ಬರ ಮನೆಯಲ್ಲೂ ಪುಸ್ತಕ ಭಂಡಾರವಿದ್ದರೆ ಅದೊಂದು ಸಮಾಜಕ್ಕೆ ಆಸ್ತಿ ಆಗಬಲ್ಲದು’ ಎಂದರು.

ಮೈಸೂರು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಚುಟುಕು ಸಿರಿ ಶ್ರೀಮತಿ ರತ್ನಾ ಹಾಲಪ್ಪ,ಚುಟುಕು ಕಣಜ ಲೇಖಕ, ದ.ಕ ಜಿಲ್ಲಾ ಚುಸಾಪ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ, ಡಾ ಸುದೇಶ್ ಭಂಡಾರಿ ಬಾವಬೀಡು, ಇರಾ ಗುತ್ತು ಜಗದೀಶ್ ಶೆಟ್ಟಿ, ಜಯರಾಮ ಪೂಜಾರಿ ಸೂತ್ರಬೈಲು, ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಚುಟುಕು ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ಕಾ.ವೀ.ಕೃಷ್ಣದಾಸ್,ಸೋಮನಾಥೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಜಯರಾಜ್ ಕುಂಡಾವು ಮೈಸೂರು ಜಿಲ್ಲಾ ಚುಸಾಪ ಉಪಾಧ್ಯಕ್ಷ ನಟರಾಜ್, ಪ್ರಗತಿಪರ ಕೃಷಿಕ ನಿಶ್ಚಲ್ ಶೆಟ್ಟಿ,ಜನಜಾಗೃತಿ ವೇದಿಕೆ ಸದಸ್ಯ ಕಲ್ಲಾಡಿ ಯತಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್, ಇರಾ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ರಮೇಶ್ ಶೆಟ್ಟಿ ಮೂಳೂರು, ಹಿರಿಯ ಕವಿ ಎನ್ ಸುಬ್ರಾಯ ಭಟ್, ಕೌಸ್ತುಭ ಪತ್ರಿಕೆಯ ಸಂಪಾದಕಿ ಚುಟುಕು ಸಿರಿ ರತ್ನ ಹಾಲಪ್ಪ ಗೌಡ, ಕವಯಿತ್ರಿ ಸೀತಾಲಕ್ಷ್ಮೀ ವರ್ಮಾ ವಿಟ್ಲ ಅವರನ್ನು ಸನ್ಮಾನಿಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗಂಗಾಧರ್ ಎ. ಇರಾ ಒಕ್ಕೂಟ ಅಧ್ಯಕ್ಷ ಭಾಸ್ಕರ್ ಕುಂಡಾವು ಕಾರ್ಯಕ್ರಮ ಸಂಯೋಜಿಸಿದರು. ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.