- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರ್ನಾಟಕ ಯಕ್ಷಗಾನ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪಟ್ಟಿ ಬಿಡುಗಡೆ

Yakshagana Academy [1]ಬೆಂಗಳೂರು  : ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸರ್ಕಾರದ ನಿಯಮಾನುಸಾರ ಒಬ್ಬ ಗಣ್ಯರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಾಗೂ 5 ಜನ ಗಣ್ಯರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಹಾಗೂ 10 ಜನ ಗಣ್ಯರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲು ಅವಕಾಶವಿದ್ದು, ಅದರಂತೆ ಆಯ್ಕೆ ಮಾಡಲು ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಿನಾಂಕ: 20.02.202 ರಂದು ಟಿ.ಆರ್.ಸಿ.ಸಭಾಭವನ, ಶಿರಸಿ ಇಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಕೆಳಕಂಡ ಗಣ್ಯರನ್ನು ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹಿರಿಯ ಯಕ್ಷಗಾನ ತೆಂಕು ಯಕ್ಷಗಾನ ಪ್ರಸಂಗಕರ್ತರು, ಸಾಹಿತಿ, ಕಲಾವಿದರಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಇವರನ್ನು ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆ ಮಾಡಲಾಯಿತು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಿಗೆ ರೂ.1ಲಕ್ಷ ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು ಪೇಟ ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು.

‘ಗೌರವ ಪ್ರಶಸ್ತಿ’ಗೆ 5 ಜನ ಗಣ್ಯರನ್ನು ಶ್ರೀ ಸತ್ಯನಾರಾಯಣ ಹಾಸ್ಯಗಾರ, ಶ್ರೀ ಮುತ್ತಪ್ಪ ತನಿಯ ಪೂಜಾರಿ, ಶ್ರೀ ನರೇಂದ್ರ ಕುಮಾರ್ ಜೈನ್, ಶ್ರೀ ಮೂಡಲಗಿರಿಯಪ್ಪ, ಶ್ರೀ ಎನ್.ಟಿ.ಮೂರ್ತಾಚಾರ್ಯ ಇವರುಗಳನ್ನು ಆಯ್ಕೆ ಮಾಡಲಾಯಿತು. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.50.000 ಗಳ ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು ಪೇಟ ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು.

‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ 10 ಜನ ಗಣ್ಯರನ್ನು ಶ್ರೀ ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀ ಗೋಪಾಲ ಗಾಣಿಗ ಆಜ್ರಿ, ಶ್ರೀ ಬೋಳಾರ ಸುಬ್ಬಯ್ಯ ಶೆಟ್ಟಿ, ಶ್ರೀ ಸೀತೂರು ಅನಂತಪದ್ಮನಾಭ ರಾವ್, ಶ್ರೀ ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತರು, ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ, ಶ್ರೀ ಕೊಕ್ಕಡ ಈಶ್ವರ ಭಟ್, ಶ್ರೀ ಅಡಿಗೋಣ ಭೀರಣ್ಣನಾಯ್ಕ, ಶ್ರೀ ಭದ್ರಯ್ಯ, ಶ್ರೀ ಬಸವರಾಜಪ್ಪ ಅವರುಗಳನ್ನು ಆಯ್ಕೆ ಮಾಡಲಾಗಿದೆ. ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.25.000-ಗಳ ನಗದು, ಪ್ರಮಾಣಪತ್ರ, ಹಾರ, ಶಾಲು ಪೇಟ ನೀಡಿ ಪುರಸ್ಕರಿಸಲಾಗುವುದು.
೨೦೨೦ ನೇ ಸಾಲಿನ ಪುಸ್ತಕ ಬಹುಮಾನ ಡಾ.ಕೆ.ರಮಾನಂದ ಬನಾರಿ ಇವರ ಅರ್ಥಾಯನ ಎಂಬ ಕೃತಿಗೆ ಹಾಗೂ ಡಾ.ಹೆಚ್.ಆರ್.ಚೇತನಾ ಇವರ ಮೂಡಲಪಾಯ ಯಕ್ಷಗಾನ ಎಂಬ ಕೃತಿಗೆ ಆಯ್ಕೆ ಮಾಡಲಾಗಿದೆ. ಪುಸ್ತಕ ಬಹುಮಾನ ಪುರಸ್ಕೃತರಿಗೆ ತಲಾ ರೂ.೨೫,೦೦೦/-ಗಳ ನಗದು, ಪ್ರಮಾಣಪತ್ರ, ಹಾರ, ಶಾಲು ಪೇಟ ನೀಡಿ ಪುರಸ್ಕರಿಸಲಾಗುವುದು.

‘ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಮತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು 2022 ರ ಮಾರ್ಚ್ ಕೊನೆಯ ವಾರದಲ್ಲಿ ಕಾರ್ಕಳದಲ್ಲಿ ನಡೆಸಲಾಗುವುದು. ಇಲಾಖಾ ಸಚಿವರು, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರೆ ಸಚಿವರ, ಶಾಸಕರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನವನ್ನು ಮಾಡಲಾಗುವುದು. ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ ಪುಸ್ತಕವನ್ನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.