[1]ಪುತ್ತೂರು : ಉಪ್ಪಿನಂಗಡಿಯ ಸರಕಾರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಇದೀಗ ಕಾಲೇಜಿನ ಸಮವಸ್ತ್ರ ನಿಯಮಾವಳಿಗಳನ್ನು ಪಾಲಿಸಿ ಸೋಮವಾರದಿಂದ ತರಗತಿಗಳಿಗೆ ಹಾಜರಾಗಿದ್ದಾರೆ.
ಕಾಲೇಜು ಆಡಳಿತದ ಆದೇಶ ವಿರೋಧಿಸಿ ವಿದ್ಯಾರ್ಥಿಗಳು ತರಗತಿ ಮತ್ತು ಪರೀಕ್ಷೆಗಳನ್ನು ಬಹಿಷ್ಕರಿಸಿದ್ದರು. ಇತ್ತ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪರ ಮಾತುಕತೆ ನಡೆಸಿದ ಮುಖಂಡರಿಗೆ ಕಾಲೇಜಿನ ಆಡಳಿತ ಮಂಡಳಿಯು ನಾವು ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಹೈಕೋರ್ಟ್ನ ಆದೇಶಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗೆ ಹಾಜರಾಗಬಾರದೆಂದು ಹೇಳಿತ್ತು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮುಖಂಡರು ಮಾತುಕತೆ ನಡೆಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಬಾರದು ಎಂದು ವಿದ್ಯಾರ್ಥಿನಿಯರು ಕಾಲೇಜಿನ ಸಮವಸ್ತ್ರ ನಿಯಮಾವಳಿಗಳನ್ನು ಪಾಲಿಸಿ ತರಗತಿಗಳಿಗೆ ಹಾಜರಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಕಾಲೇಜಿನ ಆಡಳಿತ ಸಮಿತಿ ಕಾರ್ಯಧ್ಯಕ್ಷ ಸುರೇಶ್ ಅತ್ರಮಜಲು ತಿಳಿಸಿದ್ದಾರೆ.