ಮಂಗಳೂರು : “ಮಂಗಳೂರು ನಗರವನ್ನು ದೇಶದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದನ್ನಾಗಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕೆ ನಮಗೆ ರಾಮಕೃಷ್ಣ ಮಠದ ಮಾರ್ಗದರ್ಶನ ಅಗತ್ಯ. ಈ ಮೂಲಕ ನಮ್ಮ ಮಂಗಳೂರನ್ನು ಸ್ವಚ್ಛ, ಸಮೃದ್ಧ, ಸುಂದರ, ಜನಸೇಹಿ ಮಂಗಳೂರನ್ನಾಗಿ ಮಾಡೋಣ” ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಸುಧೀರ್ ಶೆಟ್ಟಿ ಹೇಳಿದರು. ಸ್ವಚ್ಛ ಮಂಗಳೂರು ಅಭಿಯಾನ ಪುನರಾರಂಭಿಸುವ ಬಗ್ಗೆ ಪೂರ್ವಭಾವಿ ಯೋಜನೆಗಳನ್ನು ಚರ್ಚಿಸಲು ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ಗಳ ಸಭೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ನಡೆಯಿತು ಈ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಾತನಾಡಿ “ದೇವರಿಗೆ ಸಮಾನವಾದ ಭೂಮಿಯನ್ನು ಸುಂದರವಾಗಿಡೋಣ. ಸ್ವಚ್ಛತೆ ನಮ್ಮ ಸಂಸ್ಕೃತಿಯ ಒಂದು ಭಾಗವಾಗಬೇಕು. ಮಂಗಳೂರು ನನ್ನದು ಎಂದು ಪ್ರತಿಯೊಬ್ಬ ನಗರವಾಸಿಗಳಲ್ಲಿ ಭಾವನೆ ಮೂಡಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಸ್ವಚ್ಛತೆಯ ಅರಿವು ನೀಡಬೇಕು” ಎಂದರು. ಸ್ವಚ್ಛ ಮಂಗಳೂರು ಅಭಿಯಾಯನದ ರೂಪುರೇಷೆ ಹಾಗೂ ಕಾರ್ಯಯೋಜನೆಗಳ ಬಗ್ಗೆ ಇಲ್ಲಿ ಚರ್ಚಿಸಲಾಯಿತು. ಈ ಸಭೆಯಲ್ಲಿ ಮಂಗಳೂರು ನಗರದ ಮಾಜಿ ಮಹಾಪೌರರಾದ ಪ್ರೇಮಾನಂದ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಸೀತಾರಾಮ್, ಸ್ವಚ್ಛ ಮಂಗಳೂರು ಮುಖ್ಯ ಸಂಯೋಜಕರಾದ ಉಮಾನಾಥ್ ಕೋಟೆಕಾರ್, ವಿವಿಧ ವಾರ್ಡಿನ ಕಾರ್ಪೊರೇಟರ್ ಗಳು ಹಾಗೂ ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕರ್ತರು ಭಾಗವಹಿಸಿದ್ದರು.