ಮಂಗಳೂರು: ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ತೊಡದ ಮದ್ಯೆ ಸ್ಫೋಟಕ ತಯಾರಿಸುತ್ತಿದ್ದಾಗ ಉಂಟಾದ ಅವಘಡದಲ್ಲಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿ, ಆರು ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಬಶೀರ್ ಎಂಬವರ ಜಾಗದಲ್ಲಿ ಘಟನೆ ನಡೆದಿದ್ದು, ಕೇರಳ ನಿವಾಸಿಗಳಾದ ಸ್ವಾಮಿ (55) ಹಾಗೂ ವರ್ಗಿಸ್ (68), ಹಾಸನದ ಅರಸೀಕೆರೆ ನಿವಾಸಿ ಚೇತನ್ (25) ಮೃತಪಟ್ಟಿದ್ದು, ದೇಹ ಸಂಪೂರ್ಣ ಛಿದ್ರಛಿದ್ರವಾಗಿದೆ.
ಘಟನೆಯಲ್ಲಿ 6 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ದಿನೇಶ್, ಕಿರಣ್, ಕುಮಾರ್, ಕಲ್ಲೇಶ್, ಪ್ರೇಮ್ ಹಾಗೂ ಕೇಶವ ಎಂದು ಗುರುತಿಸಲಾಗಿದೆ. ಕುಟ್ಟೋಡಿ ನಿವಾಸಿ ಬಶೀರ್ ಎಂಬವರ ಜಮೀನಿನಲ್ಲಿ ಪಟಾಕಿ ತಯಾರಿಕೆ ಮಾಡುತ್ತಿದ್ದು, ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾರ್ಮಿಕರನ್ನು ಪೊಲೀಸರು ವಶಕ್ಕೆ
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಸಿ.ಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಈ ಘಟನೆ ಭಾನುವಾರ ಸಂಜೆ ಸುಮಾರು 5:30ರ ಸುಮಾರಿಗೆ ನಡೆದಿದೆ. 50 ಸೆನ್ಸ್ ಜಾಗದಲ್ಲಿ ಸಯ್ಯದ್ ಬಶೀರ್ ಎಂಬವರು ಪಟಾಕಿ ಮಾಡಲು ಲೈಸೆನ್ಸ್ ಪಡೆದಿದ್ದಾರೆ. 2011-2012 ನಲ್ಲಿ ತೆಗೆದುಕೊಂಡಿರುವ ಲೈಸೆನ್ಸ್ 2019ರಲ್ಲಿ ರಿನಿವಲ್ ಆಗಿದೆ. 2024ರ ಮಾರ್ಚ್ವರೆಗೂ ವ್ಯಾಲಿಡ್ ಆಗಿದೆ. ಡಿಮ್ಯಾಂಡ್ಗೆ ತಕ್ಕ ಹಾಗೆ ಪಟಾಕಿ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪಟಾಕಿ ತಯಾರಿಸುವಾಗ ಯಾವ ಕಾರಣಕ್ಕೆ ಬ್ಲಾಸ್ಟ್ ಆಗಿದೆ ಎಂಬುದು ಗೊತ್ತಾಗಿಲ್ಲ. ಮೊಬೈಲ್ ಫೊರೆನ್ಸಿಕ್ ಟೀಮ್, ಡಿಪಾರ್ಟ್ಮೆಂಟ್ ಆಫ್ ಎಕ್ಸ್ಪ್ಲೋಸಿವ್ ತಂಡ ಬಂದಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಮಾತನಾಡಿದ ಅವರು, ಈ ಘಟನೆಗೆ ಕಾರಣ ಏನು ಎಂಬ ಬಗ್ಗೆ ಗಂಭೀರ ತನಿಖೆ ನಡೆಯಬೇಕಿದೆ. ಪರವಾನಿಗೆ ನೀಡಿದರ ಬಗ್ಗೆ ಸರ್ಕಾರ ಗಂಭೀರ ತನಿಖೆ ಮಾಡಬೇಕು. ಸ್ಫೋಟದ ತೀವ್ರತೆ ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಈ ಪ್ರಕರಣವನ್ನು ರಾಷ್ಟೀಯ ತನಿಖಾ ದಳಕ್ಕೆ ಒಪ್ಪಿಸಬೇಕು. ಘಟನೆ ಬಹಳ ಭೀಕರವಾಗಿ ನಡೆದಿದೆ. ಈ ಘಟನೆ ಬಗ್ಗೆ ಅನುಮಾನವಿದೆ. ಮೂವರು ಬಲಿಯಾಗಿದ್ದಾರೆ. ದೊಡ್ಡದಾದ ಸ್ಫೋಟಕ ವಸ್ತುಗಳ ಸ್ಫೋಟವಾಗಿದೆ. ಸ್ಥಳೀಯ ಮನೆಗಳಿಗೆ ಸರ್ಕಾರ ಸಂಪೂರ್ಣ ಪರಿಹಾರ ಕೊಡಬೇಕು. ಬಲಿಯಾದ ಕಾರ್ಮಿಕ ಕುಟುಂಬಗಳಿಗೂ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿದ್ದು, ಈ ಪ್ರಕರಣವನ್ನು ಎನ್ಐಎಗೆ ವಹಿಸಿ ಸಮಗ್ರ ತನಿಖೆ ಮಾಡಿಸಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡುತ್ತೇನೆ. ತಕ್ಷಣವೇ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ಈ ಸ್ಫೋಟದ ಹಿಂದೆ ಯಾವುದಾದ್ರು ವ್ಯವಸ್ಥೆಯ ನಂಟಿದೆಯಾ ಅನ್ನೋದನ್ನು ನೋಡಬೇಕು. ಈ ಸ್ಫೋಟಕ್ಕೆ ಸಂಬಂಧಪಟ್ಟವರನ್ನು ತಕ್ಷಣ ಬಂಧಿಸಿ ಎಂದು ಒತ್ತಾಯಿಸಿದರು.
ವೇಣೂರು ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.