ಅಲೆಮಾರಿ ಸಮುದಾಯಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನಿಗಮ ರಚಿಸಲು ತೀರ್ಮಾನ

7:19 PM, Saturday, October 8th, 2022
Share
1 Star2 Stars3 Stars4 Stars5 Stars
(No Ratings Yet)
Loading...
ಪರಿಶಿಷ್ಟ ಜಾತಿ

ಬೆಂಗಳೂರು : ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಎಸ್ಸಿ ಎಸ್ಟಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ರಚಿಸಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ತಳಸಮುದಾಯಗಳಿಗೆ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಮುಟ್ಟಿಲ್ಲ ಎಂದು ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಹೇಳಿದ್ದು, ಇವರಿಗೆ ನ್ಯಾಯ ಒದಗಿಸಲು ಕೂಲಂಕಷವಾಗಿ ಕಾನೂನಾತ್ಮಕ ಅಂಶಗಳನ್ನು ತಜ್ಞರು ಪರಿಶೀಲಿಸಿ, ಮುಂದೆ ಕ್ರಮ ತೆಗೆದುಕೊಳ್ಳಬಹುದೆಂದು ಹೇಳಿದ್ದಾರೆ. ಒಳಮೀಸಲಾತಿ ಬಗ್ಗೆ ಬಗ್ಗೆ ಅಧ್ಯಯನ ಮಾಡಿರುವ ಸದಾಶಿವ ಆಯೋಗದ ಪ್ರಮುಖ ಅಂಶಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಜಾತಿಗಳ ಹಿತರಕ್ಷಣೆ ಮಾಡುವ ಸಲುವಾಗಿ ಮತ್ತು ಒಳಮೀಸಲಾತಿಯಿಂದ ಪರಿಣಾಮ ಬೀರುವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇನ್ನು ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದು ಅಧಿಕೃತವಾಗಿ ಚರ್ಚೆ ಮಾಡಿ ಕೈಗೊಂಡಿರುವ ತೀರ್ಮಾನ ಎಂದರು.

ಮೀಸಲಾತಿ ಹೆಚ್ಚಳದ ನಿರ್ಧಾರ:
ನಿನ್ನೆ ನಡೆದ ಸರ್ವ ಪಕ್ಷ ಸಭೆಯಲ್ಲಿ ತೀರ್ಮಾನಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಶಿಫಾರಸ್ಸು ಮಾಡಿರುವಂತೆ ಪರಿಶಿಷ್ಟ ಜಾತಿಗೆ ಶೇ 17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 7 ರಷ್ಟು ಹೆಚ್ಚಿಸಬೇಕೆನ್ನುವ ವಿಚಾರವನ್ನು ಒಪ್ಪಿ ಅದಕ್ಕೆ ಆದೇಶ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ ಎಂದರು.

ಈ ನಿರ್ಣಯಕ್ಕೆ ಕಾನೂನಿನ ರಕ್ಷಣೆ ನೀಡಲು ಸಂವಿಧಾನದ ಪರಿಚ್ಛೇದ 9 ಕ್ಕೆ ಸೇರಿಸಲು ವಿಧಿವಿಧಾನಗಳನ್ನು ಕಾನೂನು ಸಚಿವರು, ಕಾನೂನು ಆಯೋಗ ಮತ್ತು ಸಂವಿಧಾನದ ತಜ್ಞರು ಹಾಗೂ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಕೂಡಲೇ ಶಿಫಾರಸು ಮಾಡಿ ಅನುಷ್ಠಾನ ಮಾಡುವ ತೀರ್ಮಾನ ಮಾಡಿದೆ ಎಂದರು.

ಒಟ್ಟು ಮೀಸಲಾತಿಯ ಪ್ರಮಾಣ ಶೇ 50 ರಷ್ಟು ದಾಟಿದ್ದು ಕಾನೂನು ರಕ್ಷಣೆ ಸಿಗುವುದೋ ಇಲ್ಲವೋ ಎಂಬ ಬಗ್ಗೆ ಪ್ರಶ್ನೆಗಳಿವೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಯಿಂದ ದೂರವಿರುವ ಪರಿಶಿಷ್ಟ ಪಂಗಡಗಳ ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಅದಕ್ಕೆ ಮೀಸಲಾತಿ ನೀಡಬಹುದುದೆಂದು ಹೇಳಲಾಗಿದೆ ಎಂದರು.

ವಿಶೇಷ ಪ್ರಕರಣ
ನ್ಯಾಯಮೂರ್ತಿ ನಾಗಮೋಹನ್ ದಾಸ್ ಹಾಗೂ ನ್ಯಾ.ಸುಭಾಷ್ ಅಡಿ ಅವರು ಇದು ಯಾಕೆ ವಿಶೇಷ ಪ್ರಕರಣವಾಗುತ್ತದೆ ಎಂದು ಸ್ಪಷ್ಟವಾಗಿ ತಮ್ಮ ವರದಿಯಲ್ಲಿ ನಮೂದಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಇರಬೇಕು ಹಾಗೂ ಸಾಮಾಜಿಕವಾಗಿ ಅಂಕಿಅಂಶಗಳ ಸಮೇತವಾಗಿ ಇವೆಲ್ಲವೂ ಮುಖ್ಯ ವಾಹಿನಿಯಿಂದ ದೂರವಿದ್ದು, ಸಾಕಷ್ಟು ಪ್ರಾತಿನಿಧ್ಯ ಇಷ್ಟು ವರ್ಷಗಳಾದರೂ ದೊರೆತಿಲ್ಲ. ಹಾಗಾಗಿ ಇದು ವಿಶೇಷ ಪ್ರಕರಣ ವಾಗಿದೆ ಎಂದು ಕಾರಣಗಳನ್ನು ನೀಡಿದ್ದಾರೆ ಎಂದು ವಿವರಿಸಿದರು.

ಪರಿಚ್ಛೇದ 9 ರಲ್ಲಿ ರಕ್ಷಣೆ ಪಡೆಯಲು ಸಕಾರಣಗಳನ್ನು ನೀಡಲು ಸರ್ಕಾರದ ಕ್ರಮ
ಬುಡಕಟ್ಟು ಜನಾಂಗ ಹಾಗೂ ಪರಿಶಿಷ್ಟ ಜಾತಿಗಳ ಮೀಸಲಾತಿ ಮಧ್ಯಪ್ರದೇಶ, ಛತ್ತೀಸ್ ಗಡ್, ಜಾರ್ಖಂಡ್, ರಾಜಸ್ಥಾನ, ತಮಿಳುನಾಡು ರಾಜ್ಯಗಳಲ್ಲಿ ಶೇ 50 ನ್ನು ಮೀರಿದೆ. ಯಾವುದೇ ನ್ಯಾಯಾಲಯದ ಆದೇಶ ಇದರ ವಿರುದ್ಧ ಬಂದಿಲ್ಲ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ಕ್ಕೆ ತಿದ್ದುಪಡಿ ತಂದು ಶೇ 50 ಕ್ಕಿಂತ ಹೆಚ್ವು ಮೀಸಲಾತಿ ನೀಡಿ ಆದೇಶವನ್ನು ನೀಡಿದೆ. ಇವೆರಡನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಯಾವುದೇ ವ್ಯತಿರಿಕ್ತ ತೀರ್ಪು ಇದುವರೆಗೆ ಬಂದಿಲ್ಲ. ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ಅದಕ್ಕೆ ಪರಿಚ್ಛೇದ 9 ರಲ್ಲಿ ರಕ್ಷಣೆ ಪಡೆಯಲು ಸಕಾರಣಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ನಾವು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಿರುವ ಮೀಸಲಾತಿಯ ಹೆಚ್ಚಳವನ್ನು ರಕ್ಷಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಈಗಾಗಲೇ ಚರ್ಚೆಯಾಗಿದೆ. ಇನ್ನಷ್ಟು ಚರ್ಚಿಸಿ ಎಲ್ಲಾ ವಿವರಗಳೊಂದಿಗೆ ಗೆಜೆಟ್ ಅಧಿಸೂಚನೆ ಹಾಗೂ ಪರಿಚ್ಛೇದ 9 ರಲ್ಲಿ ಸೇರಿಸಲು ಶಿಫಾರಸ್ಸು ಮಾಡಲಾಗುವುದು ಎಂದರು.

ತಳಸಮುದಾಯಗಳಿಗೆ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಮುಟ್ಟಿಲ್ಲ ಎಂದು ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಹೇಳಿದ್ದು ಇದಕ್ಕೆ ನ್ಯಾಯ ಒದಗಿಸಲು ತಜ್ಞರ ಸಮಿತಿ ರಚಿಸಿ, ಕೂಲಂಕಷವಾಗಿ ಪರಿಶೀಲಿಸಿ ಯಾರಿಗೆ ಒಳಮೀಸಲಾತಿ ಅಗತ್ಯ ವಿದೆ ಎಂಬ ಬಗ್ಗೆ ಚರ್ಚಿಸಲಾಗುವುದು.

ಸಮಗ್ರ ಹಾಗೂ ಸಮರ್ಥನೀಯ ವರದಿ
ಗೆಜೆಟ್ ಅಧಿಸೂಚನೆ ವಿಸ್ತೃತವಾಗಿ ಇರಲಿದೆ. ಇದುವರೆಗೆ ಶೇ 50ರೊಳಗೇ ಇದ್ದರೂ ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾಗಮೋಹನ್ ದಾಸ ವರದಿ ಸಮಗ್ರವಾಗಿದೆ ಹಾಗೂ ಸಮರ್ಥನೀಯವಾಗಿದೆ. ವಿಶೇಷ ಪ್ರಕರಣ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಗಟ್ಟಿಯಾದ ನೆಲೆಗಟ್ಟಿದೆ. ಇಂದಿರಾ ಸಹಾನಿ ಪ್ರಕರಣದ ಬೆಂಬಲವಿದೆ. ಹಿಂದಿನ ಪ್ರಕರಣಗಳನ್ನು ಗಮನಿಸಿ ಈ ಸಮುದಾಯಗಳಿಗೆ ತಕ್ಷಣದ ಸೌಲಭ್ಯ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪರಿಚ್ಛೇದ 9 ಕ್ಕೆ ಸೇರಿಸಲು ತನ್ನದೇ ವಿಧಾನಗಳಿವೆ. ಸಂವಿಧಾನದ ತಿದ್ದುಪಡಿ ಯಾಗಬೇಕು. ಸಮಯವೂ ಬೇಕು ಎಂದರು.

ಪಂಚಾಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ವರದಿ ಬಂದಾಗ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English