ನವದೆಹಲಿ : ಭಾರತದ ಕ್ರಿಕೆಟಿಗ ರಿಷಬ್ ಪಂತ್ ಚಲಾಯಿಸುತ್ತಿದ್ದ ಬೆನ್ಜ್ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಅವರ ತಲೆ, ಬೆನ್ನಿಗೆ ತೀವ್ರ ಗಾಯಗಳಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾರತದ ಸ್ಟಾರ್ ವಿಕೆಟ್ಕೀಪರ್ ರಿಷಬ್ ಪಂತ್ ಅವರ ಕಾರು ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಅಹಮ್ಮದ್ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಅವರ ಕಾರು ಅಪಘಾತಕ್ಕೀಡಾಯಿತು. ವೈದ್ಯರ ಪ್ರಕಾರ, ಪಂತ್ ಅವರ ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ. ಪೊಲೀಸ್ ವರಿಷ್ಠಾಧಿಕಾರಿ ದೇಹತ್ ಸ್ವಪ್ನಾ ಕಿಶೋರ್ ಸಿಂಗ್ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ರಿಷಬ್ ಪಂತ್ ಸ್ಥಿತಿ ಸ್ಥಿರವಾಗಿದ್ದು, ಅವರನ್ನು ರೂರ್ಕಿಯಿಂದ ದೆಹಲಿಗೆ ಕಳುಹಿಸಲಾಗುತ್ತಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ರಿಷಬ್ ಅವರ ಕಾರು ರೇಲಿಂಗ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಬಹಳ ಕಷ್ಟಪಟ್ಟು ಬೆಂಕಿಯನ್ನು ಹತೋಟಿಗೆ ತರಲಾಯಿತು. ಅದೇ ಸಮಯದಲ್ಲಿ, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ರಿಷಬ್ ಪಂತ್ ಅವರನ್ನು ದೆಹಲಿ ರಸ್ತೆಯಲ್ಲಿರುವ ಸಕ್ಷಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ತಪಾಸಣೆಗಾಗಿ ಅವರನ್ನು ಡೆಹ್ರಾಡೂನ್ಗೆ ಕರೆತರಲಾಗುತ್ತಿದೆ. ಜೊತೆಗೆ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆ ಇರುವುದಾಗಿ ವರದಿಯಾಗಿದೆ.
ಉತ್ತರಾಖಂಡದ ಮಂಗಳೌರ್ ಬಳಿ ಇಂದು ಬೆಳಗ್ಗೆ 5.15ರ ಸುಮಾರಿಗೆ ರಿಷಬ್ ಪಂತ್ ಅವರ ಕಾರು ಅಪಘಾತಕ್ಕೀಡಾಗಿದೆ. ಅಪಘಾತದ ನಂತರ ಅವರ ಕಾರು ಸುಟ್ಟು ಕರಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಿಷಭ್ ಪಂತ್ ಅವರು ಒಬ್ಬರೇ ಕಾರಿನಲ್ಲಿ ತೆರಳುತ್ತಿದ್ದರು ಎಂದು ಮಾಹಿತಿ ದೊರೆತಿದೆ. ಪಂತ್ ಅಪಘಾತದ ಸುದ್ದಿಯಿಂದ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟಿಗರು ಆಘಾತಕ್ಕೊಳಗಾಗಿದ್ದಾರೆ. ರಿಷಬ್ ಪಂತ್ ಗೆ ಧೈರ್ಯ ತುಂಬಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ರಿಷಬ್ ಪಂತ್ ಅಪಘಾತಕ್ಕೆ ಸಂಬಂಧಿಸಿದ ಫೋಟೋಗಳು ನೆಟ್ನಲ್ಲಿ ವೈರಲ್ ಆಗುತ್ತಿವೆ.
ತಮ್ಮ ತಾಯಿಗೆ ಸರ್ಪ್ರೈಸ್ ನೀಡಲು ರಿಷಭ್ ಪಂತ್ ಮನೆ ಕಡೆ ಹೊರಟಿದ್ದರು. ಈ ವೇಳೆ ಅಪಘಾತವಾಗಿದೆ. ಈ ವಿಚಾರ ತಿಳಿದ ಪಂತ್ ಪೋಷಕರು ಕೂಡ ಕಣ್ಣೀರಿಟ್ಟಿದ್ದಾರೆ. ಒನ್ಡೇ ವಿಶ್ವಕಪ್ನಲ್ಲಿ ಸ್ಥಾನ ಪಡೆದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕೆಂಬ ಆಸೆಯನ್ನು ಪಂತ್ ಹೊಂದಿದ್ದರು. ಆದರೆ, ಈಗ ಈ ರೀತಿ ಘಟನೆ ನಡೆದಿರುವುದು, ನಿಜಕ್ಕೂ ಅಭಿಮನಿಗಳಿಗೆ ಬೇಸರ ಮೂಡಿಸಿದೆ.
Click this button or press Ctrl+G to toggle between Kannada and English