[1]ಮಂಗಳೂರು :ಫರಂಗಿಪೇಟೆಯಲ್ಲಿಯ ಕೇಂದ್ರ ಮೈದಾನದಲ್ಲಿರುವ ಅಬ್ದುಲ್ ನಜೀರ್ ಸಾಬ್ ವೇದಿಕೆಯಲ್ಲಿ ಫೆಬ್ರವರಿ 2 ಶನಿವಾರದಂದು ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಮಾವೇಶದ ಸ್ವಾಗತ ಸಮಿತಿ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ತಿಳಿಸಿದರು. ಸಮಾವೇಶವನ್ನು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಸಮಾವೇಶ ಸಮಾರಂಭದ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ವಹಿಸಲಿದ್ದಾರೆ ಎಂದರು.
ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆಬ್ರವರಿ 2 ರಂದು ಬಂಟ್ಸ್ ಹಾಸ್ಟೆಲ್ ಬಳಿಯಿಂದ ಬೆಳಿಗ್ಗೆ 11.30ಕ್ಕೆ ಮೆರವಣಿಗೆಯು ಪ್ರಾರಂಭವಾಗಿ ನಂತರ ಫಳ್ನೀರ್ ನಲ್ಲಿರುವ ಪಕ್ಷದ ಕಚೇರಿ ಬಳಿ ತೆರಳಿ, ಜಲ್ಲಿಗುಡ್ಡೆಯ ಬಳಿ ಮಧ್ಯಾಹ್ನ 1.30ಕ್ಕೆ ಪತ್ರಿಕಾಗೋಷ್ಠಿ ನಡೆಯಲಿದೆ. ಜಲ್ಲಿಗುಡ್ಡೆಯಿಂದ ಸಮಾವೇಶ ನಡೆಯುವ ಫರಂಗಿಪೇಟೆ ಮೈದಾನಕ್ಕೆ ಬೃಹತ್ ವಾಹನ ಜಾಥಾ ನಡೆಯಲಿದ್ದು ಪಕ್ಷದ ಅನೇಕ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಾಯಕರುಗಳಾದ ವಸಂತ ಪೂಜಾರಿ, ಮಹಮ್ಮದ್ ಕುಂಞ, ವಿಟ್ಲ ರತ್ನಾಕರ್ ಸುವರ್ಣ, ಹಸನ್ ಬಾವ, ಹಾಜಿ ವಿ.ಹೆಚ್. ಅಬ್ದುಲ್ ಕರೀಂ ಹಾಗೂ ಇತರರು ಉಪಸ್ಥಿತರಿದ್ದರು.