[1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಿದ್ದು, ಇಡೀ ರಾಜ್ಯದಲ್ಲಿಯೇ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ದೆ. ಇಲ್ಲಿ ಹೊರದೇಶ ಹಾಗೂ ಹೊರರಾಜ್ಯಗಳಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದು ಇವರನ್ನು ಕೇಂದ್ರವಾಗಿರಿಸಿಕೊಂಡು ಡ್ರಗ್ ಮಾಫಿಯಾಗಳು ಕಾರ್ಯಾಚರಿಸುತ್ತಿದ್ದು ಅಮಾಯಕ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಶೀಘ್ರವೇ ಡ್ರಗ್ಸ್ ಮಾಫಿಯಾವನ್ನು ನಮ್ಮ ಜಿಲ್ಲಾಡಳಿತ ಹಾಗೂ ಸರಕಾರಗಳು ನಿಯಂತ್ರಿಸದೇ ಹೋದಲ್ಲಿ ಯುವಜನತೆ ಅಡ್ಡದಾರಿ ಹಿಡಿಯುವ ಸಾಧ್ಯತೆ ಇದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಹೇಳಿದರು.
[2]ಡ್ರಗ್ಸ್ ಚಟಕ್ಕೆ ಬಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಸ್ನೇಹಾ ಉಪಾಧ್ಯಾಯ ಸಾವಿನ ಹಿನ್ನಲೆಯಲ್ಲಿ ಅವಳ ಸಾವಿಗೆ ಕಾರಣವಾದ ಡ್ರಗ್ಸ್ ಮಾಫಿಯಾವನ್ನು ತೊಡೆದು ಹಾಕಲು ಸರಕಾರಗಳು ಕ್ರಮ ರೂಪಿಸುವಂತೆ ಒತ್ತಾಯಿಸಿ ಇಂದು ನಗರದ ಕೆಪಿಟಿ ಬಳಿಯಿರುವ ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಾನವ ಸರಪಳಿಯನ್ನು ನಿರ್ಮಿಸಿ ರಸ್ತೆ ತಡೆ ಮಾಡುವುದರ ಮುಖಾಂತರ ಪ್ರತಿಭಟಿಸಲಾಯಿತು. ಯುವಜನತೆಯನ್ನು ದಾರಿ ತಪ್ಪಿಸಿ ಅವರ ಭವಿಷ್ಯ ಹಾಳು ಮಾಡುವ ಡ್ರಗ್ಸ್ ಮಾಫಿಯವನ್ನು ನಿಯಂತ್ರಿಸಲು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯ ಮೂಲಕ ಆಗ್ರಹಿಸಲಾಯಿತು.
ಮಂಗಳೂರು ನಗರ ಸಂಘಟನಾ ಕಾರ್ಯದರ್ಶಿ ವಿನಯ್ ಹೊರಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ವ್ಯಾಪಕವಾಗಿ ವಿದ್ಯಾರ್ಥಿಗಳ ಕೈಗೆ ಗಾಂಜಾ, ಮಾದಕ ದ್ರವ್ಯ ಸಿಗುವುದಾದರೆ ಪೊಲೀಸರ ಗಮನಕ್ಕೆ ಯಾಕೆ ಬರುವುದಿಲ್ಲ, ಪೊಲೀಸ್ ಇಲಾಖೆಯು ಡ್ರಗ್ಸ್, ಗಾಂಜಾ ಮಾರಾಟ ಕೇಂದ್ರಗಳನ್ನು ಪ್ರತ್ಯೇಕವಾದ ವಿಭಾಗ ಮಾಡಿ ಕಂಡುಹಿಡಿಯಬೇಕು. ಅಂತಹ ಕೇಂದ್ರಗಳು ಪತ್ತೆಯಾದಾಗ ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ ಅವುಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದರು.