[1]ಬಂಟ್ವಾಳ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಕಶೆಕೋಡಿ ಎಂಬಲ್ಲಿ ಸೋಮವಾರ ಯುವತಿಯೊಬ್ಬಳ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಲಾಗಿದೆ. ಯುವತಿಯನ್ನು ಕಶೆಕೋಡಿ ಸೀತಾರಾಮ ಮತ್ತು ನಳಿನಾಕ್ಷಿ ದಂಪತಿ ಪುತ್ರಿಯಾದ ಸೌಮ್ಯ ಎಂದು ಗುರುತಿಸಲಾಗಿದ್ದು, ಶಂಕಿತ ಆರೋಪಿ ಸ್ಥಳೀಯ ನಿವಾಸಿ ಸತೀಶ (30) ಎಂಬಾತನನ್ನು ನಗರ ಠಾಣೆ ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡಿದ್ದಾರೆ.
ಸೀತಾರಾಮ ಅವರ ನಾಲ್ವರು ಪುತ್ರಿಯರಲ್ಲಿ ಸೌಮ್ಯಾ ಹಿರಿಯವಳಾಗಿದ್ದು, ಇತ್ತೆಚೆಗಷ್ಟೇ ಡಿಎಡ್ ಕೋರ್ಸ್ ಮುಗಿಸಿ 15 ದಿನಗಳ ಹಿಂದಷ್ಟೇ ಮಣಿಪಾಲದ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಉಡುಪಿಯ ಚಿಕ್ಕಮ್ಮನ ಮನೆಯಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಡಿಎಡ್ ಕೋರ್ಸು ಮಾಡಿದ್ದ ಆಕೆ ಶಿಕ್ಷಕಿ ಹುದ್ದೆಗೆ ಸರಕಾರ ಅರ್ಜಿ ಕರೆದಿರುವ ಹಿನ್ನೆಲೆಯಲ್ಲಿ ಸೋಮವಾರ ಆಕೆ ಸೂಕ್ತ ದಾಖಲೆಪತ್ರಗಳನ್ನು ಕೊಂಡುಹೋಗಲು ಮನೆಗೆ ಮನೆಗೆ ಮರಳಿದ್ದಳು.
[2]ಮಧ್ಯಾಹ್ನ 1.30 ಸುಮಾರಿಗೆ ಕಲ್ಲಡ್ಕ, ದಾಸಕೋಡಿ ಎಂಬಲ್ಲಿ ಬಸ್ನಿಂದ ಇಳಿದು ನಡೆದುಕೊಂಡು ಬರುವಾಗ ದಾರಿ ಮಧ್ಯೆ ಆರೋಪಿ ಸತೀಶ್, ಆಕೆಯ ಅತ್ಯಾಚಾರಕ್ಕೆ ಯತ್ನಿಸಿರಬಹುದು, ಈ ಸಂದರ್ಭ ಪ್ರತಿಭಟಿಸಿದ ಸೌಮ್ಯಳ ಕುತ್ತಿಗೆಗೆ ಟವೆಲ್ನಿಂದ ಬಿಗಿದು ಸಾಯಿಸಿದ್ದಾನೆ. ಬಳಿಕ ಅವಳ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ನಿರ್ಜನ ಪ್ರದೇಶದ ಕೆರೆಯೊಂದಕ್ಕೆ ಆಕೆಯನ್ನು ಎಸೆದು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
[3]ಘಟನೆ ನಡೆದ ಸ್ವಲ್ಪ ಸಮಯದಲ್ಲಿ ಅದೇ ದಾರಿಯಲ್ಲಿ ಹೋಗುತ್ತಿದ್ದ ಹುಡುಗಿಯೊಬ್ಬಳಿಗೆ ಮೊಬೈಲ್ ಸೆಟ್ ದೊರೆತಿತ್ತು. ಅದಕ್ಕೆ ಬಂದ ಕರೆಯನ್ನು ಸ್ವೀಕರಿಸಿದ ಆಕೆ ಮೊಬೈಲನ್ನು ಕೊಂಡೊಯ್ದು ಸೌಮ್ಯಾ ಅವರ ತಾಯಿಗೆ ನೀಡಿದ್ದು, ಸುಮ್ಯಾಳ ಬಗ್ಗೆ ವಿಚಾರಿಸಿದ್ದಾರೆ ಇದರಿಂದ ಗಾಬರಿಗೊಂಡ ತಾಯಿ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಆನಂತರ ಮೊಬೈಲ್ ಸಿಕ್ಕಿದ ಪರಿಸರದಲ್ಲಿ ಊರಿನ ಮಂದಿ ಸಹಿತ ಹುಡುಕಾಟ ನಡೆಸಿದರು. ಎಳೆದಾಟದ ಕುರುಹುಗಳನ್ನು ಅನುಸರಿಸಿ ಕೆರೆಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ.ಮೃತದೇಹದ ಕುತ್ತಿಗೆ ಮತ್ತು ತುಟಿಯಲ್ಲಿ ಗಾಯದ ಗುರುತುಗಳು ಕಂಡುಬಂದಿವೆ.
ಆರೋಪಿ ಸತೀಶನನ್ನು ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡಿದ್ದು ವಿಚಾರನಣೆಗೊಳಪಡಿಸಿದ್ದಾರೆ.