[1]ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರ ನೀಡಿರುವ ತೀರ್ಪಿನಿಂದಾಗಿ ಅತಂತ್ರ ಸ್ಥಿತಿಗೆ ತಲುಪಿರುವ, ಕಾಂಗ್ರೆಸ್ ನ್ನು ಬಲವಾಗಿ ವಿರೋದಿಸುವ ಬಿಜೆಪಿ ಇದೀಗ ಜೆಡಿಎಸ್ ನೊಂದಿಗೆ ಕೈ ಜೋಡಿಸಲು ಒಲವು ತೋರಿದೆ ಎಂಬ ಸುದ್ದಿಯೊಂದಿಗೆ, ಪಕ್ಷದಿಂದ ಹೊರಹೋಗಿ ತನ್ನದೇ ಆದ ಮತ್ತೊಂದು ಪಕ್ಷ ವನ್ನು ಸ್ಥಾಪಿಸಿ ಆ ಮೂಲಕ ಪಕ್ಷದಲ್ಲಿ ಬಿರುಕು ಮೂಡಿಸಿದ ಯಡಿಯೂರಪ್ಪರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಅವರತ್ತ ಸ್ನೇಹದ ಹಸ್ತ ಚಾಚಿದೆ ಎನ್ನಲಾಗಿದೆ.
ಈಗಾಗಲೇ ನಿನ್ನೆ ಫಲಿತಾಂಶ ಪ್ರಕಟಗೊಂಡು ಸೋಲು ಖಚಿತ ಗೊಳ್ಳುತ್ತಿದ್ದಂತೆ ಜಗದೀಶ್ ಶೆಟ್ಟರ್ ಅವರ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರು, ಮತ್ತಿತರ ನಾಯಕರು ಸೇರಿ ಸಭೆ ನಡೆಸಿದ್ದಾರೆ. ಅಲ್ಲದೆ ರಾಜ್ಯದ ಫಲಿತಾಂಶ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ. ಮತ್ತು ಯಡಿಯೂರಪ್ಪ ಇಲ್ಲದ ಬಿಜೆಪಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇದಕ್ಕಿಂತ ಹೀನಾಯ ಸೋಲುಂಡರೆ ಎಂಬ ಕಳವಳ ಬಿಜೆಪಿ ನಾಯಕರಲ್ಲಿ ಮೂಡಿದಂತಿದೆ.
ಇದೇ ವೇಳೆ ಕಾಂಗ್ರೆಸ್ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದ್ದರೂ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೆಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.