[1]ಮಡಿಕೇರಿ : ಸೋಮವಾರ ಮುಂಜಾನೆ 3.11ಕ್ಕೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಪಾರ ಭಕ್ತವೃಂದಕ್ಕೆ ಕಾವೇರಿ ತೀರ್ಥರೂಪಿಣಿಯಾಗಿ ಹರಿಯುವುದರೊಂದಿಗೆ ನೆರೆದ ಭಕ್ತರಿಗೆ ದರ್ಶನವಿತ್ತಳು. ಭಕ್ತರ ಉದ್ಘೋಷ, ಮುಗಿಲು ಮುಟ್ಟಿದ ಮಂತ್ರಘೋಷ ದೊಂದಿಗೆ ತಲಕಾವೇರಿಯಲ್ಲಿ ತಿರ್ಥೂದ್ಭವವಾಯಿತು.
ನೆರೆದ ಭಕ್ತವೃಂದ ಸ್ನಾನಕೊಳದ ಸಮೀಪ ತೀರ್ಥ ಪ್ರೋಕ್ಷಣೆಗೆ ಶಿರವೊಡ್ಡಿ ಪುನೀತರಾದರು. ತಮಿಳುನಾಡು, ಮಂಡ್ಯ, ಬೆಂಗಳೂರು ಮುಂತಾದ ಕಡೆಗಳಿಂದ ಆಗಮಿಸಿದ ಭಕ್ತರು ಭಾಗಮಂಡಲದಲ್ಲಿ ಸ್ನಾನ ಮಾಡಿ ಭಗಂಡೇಶ್ವರನ ದರ್ಶನ ಪಡೆದು ತಲಕಾವೇರಿಗೆ ಆಗಮಿಸಿದರೆ, ಇನ್ನು ಕೆಲವರು ಮೈಸೂರು ದಸರಾ ಮುಗಿಸಿ ಬಂದಿದ್ದರು.
ಬ್ರಹ್ಮಕುಂಡಿಕೆಯ ಮುಂಭಾಗದ ಸ್ನಾನಕೊಳದಿಂದ ಭಕ್ತರು ತಾವು ತಂದಿದ್ದ ಬಿಂದಿಗೆ, ಕ್ಯಾನ್ ಮುಂತಾದ ಪಾತ್ರೆಗಳಲ್ಲಿ ತೀರ್ಥವನ್ನು ತುಂಬಿಸಿಕೊಂಡರು.
ತಮಿಳುನಾಡು, ಮಂಡ್ಯ ಅನ್ನಸಂತರ್ಪಣ ಸಮಿತಿ ಹಾಗೂ ಕೊಡಗು ಏಕೀಕರಣ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ತೀರ್ಥೋದ್ಭವದ ಬಳಿಕ ವಿಶೇಷ ಪೂಜೆಗಳು ನಡೆಯಿತು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲೂ ಈ ಸಂದರ್ಭ ಪೂಜೆ ಪುನಸ್ಕಾರಗಳು ನಡೆದಿದೆ. ಕಾವೇರಿ ನದಿ ತೀರದಲ್ಲಿ ಹಿರಿಯರಿಗೆ ಪಿಂಡ ಸಮರ್ಪಣೆಯು ಈ ಸಂಧರ್ಭದಲ್ಲಿ ನಡೆಯಿತು