[1]ಮಂಗಳೂರು : ಕೋಟೆಕಾರು ಗ್ರಾಮದ ಬಗಂಬಿಲ ಸಮೀಪ ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿರ್ಮಿಸಲಾಗುವ ಬಹು ಮಹಡಿ ವಸತಿ ಸಂಕೀರ್ಣಕ್ಕೆ ಭಾನುವಾರ ವಸತಿ ಸಚಿವ ವಿ. ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರಿನಲ್ಲಿ ಈಗಾಗಲೇ ಗುರುತಿಸಲಾದ 38 ಎಕರೆ ಸರಕಾರಿ ಜಾಗದಲ್ಲಿ ವಸತಿ ಬಡಾವಣೆ ಹಾಗೂ ಸಂಕೀರ್ಣ ನಿರ್ಮಿಸುವಂತೆ ಪ್ರಸ್ತಾವನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 1500 ಕೋಟಿ ರೂಪಾಯಿ ಗಳ ಕ್ರಿಯಾ ಯೋಜನೆ ರೂಪಿಸಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ಮುಂದುವರಿದು, ಕೋಟೆಕಾರಿನ ಬಗಂಬಿಲದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಸತಿ ಸಂಕೀರ್ಣದ ಒಂಬತ್ತು ಮಹಡಿಯಲ್ಲಿ ಸುಮಾರು 216 ಮನೆಗಳು ನಿರ್ಮಾಣವಾಗಲಿದೆ ಮತ್ತು ಈ ಬಡಾವಣೆಯಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಯು.ಟಿ. ಖಾದರ್ ವಹಿಸಿದ್ದರು. ವಿಧಾನಸಭೆ ಉಪ ಸಭಾಪತಿ ಎನ್.ಯೋಗೀಶ್ ಭಟ್, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ, ಕೋಟೆಕಾರು ಗ್ರಾ.ಪಂ. ಅಧ್ಯಕ್ಷ ಶೇಖರ್ ಕನೀರುತೋಟ, ಬೆಂಗಳೂರು ಕೆಎಚ್ಬಿ ಮುಖ್ಯ ಅಭಿಯಂತರ ಬಿ. ಗುರುಪ್ರಸಾದ್ ಉಪಸ್ಥಿತರಿದ್ದರು.