ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯಿದೆಯನ್ನು ಅತ್ಯಂತ ಬಿಗಿಯಾಗಿ ಜಾರಿಗೊಳಿಸಲು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ. ಅವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಇತ್ತೀಚಿನ ಕಾಯಿದೆ ತಿದ್ದುಪಡಿಯಂತೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಯಾವುದೇ ಕಾರಣಕ್ಕೂ ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಅಂಗಡಿಗಳಲ್ಲಿ ಇವುಗಳನ್ನು ಮಾರಾಟ ಮಾಡುವ ಸಿಬ್ಬಂದಿಗೂ ಕನಿಷ್ಠ 21 ವರ್ಷ ತುಂಬಿರಬೇಕು. ಜೊತೆಗೆ ಶಾಲಾ-ಕಾಲೇಜುಗಳ 100 ಮೀಟರ್ ಸುತ್ತಳತೆಯಲ್ಲಿ ತಂಬಾಕು ಮಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಾಲೂಕು, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ, ಆರೋಗ್ಯ, ಪೊಲೀಸ್ ಮತ್ತು ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಜಂಟಿಯಾಗಿ ನಿರಂತರ ದಾಳಿ ನಡೆಸಬೇಕು. ಅಪ್ರಾಪ್ತರಿಗೆ ತಂಬಾಕು ಮಾರಾಟ ಮಾಡುವ ಅಂಗಡಿ, ಕೆಫೆ ಅಥವಾ ಹೋಟೆಲ್ಗಳ ವ್ಯಾಪಾರ ಪರವಾನಗಿಯನ್ನು (ಲೈಸೆನ್ಸ್) ತಕ್ಷಣವೇ ರದ್ದುಗೊಳಿಸಲು ಆದೇಶಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಹಾಗೂ ತಂಬಾಕು ಅಗಿದು ಉಗುಳುವುದು ಕಂಡುಬಂದರೆ 1,000 ರೂಪಾಯಿ ದಂಡ ವಿಧಿಸಲಾಗುವುದು.
ಸಿಗರೇಟ್ಗಳನ್ನು ಬಿಡಿ (ಸಿಂಗಲ್) ಆಗಿ ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ, ಅವುಗಳನ್ನು ಇಡೀ ಪ್ಯಾಕ್ನಲ್ಲೇ ಮಾರಬೇಕು. ಗ್ರಾಹಕರಿಗೆ ಅನುಕೂಲವಾಗುವಂತೆ ಬೆಂಕಿಪೆಟ್ಟಿಗೆ ಅಥವಾ ಲೈಟರ್ಗಳನ್ನು ಇಡುವ ಅಂಗಡಿಯವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು. ಪ್ರತಿಯೊಂದು ಶಿಕ್ಷಣ ಸಂಸ್ಥೆಯು ‘ತಂಬಾಕು ಮುಕ್ತ ಶಾಲೆ’ ಎಂದು ಶಾಲಾ ಮುಖ್ಯಸ್ಥರು ಹಾಗೂ ಎಸ್ಡಿಎಂಸಿ ಮೂಲಕ ಪ್ರತಿ ತಿಂಗಳು ದೃಢೀಕರಣ ನೀಡಬೇಕು. ವಿದ್ಯಾರ್ಥಿಗಳ ಬ್ಯಾಗ್ಗಳನ್ನು ನಿಯಮಿತವಾಗಿ ತಪಾಸಣೆ ನಡೆಸುವಂತೆ ಶಿಕ್ಷಣ ಇಲಾಖೆಗೆ ತಿಳಿಸಲಾಗಿದ್ದು, ವ್ಯಾಪಾರ ಪರವಾನಗಿ ನೀಡುವಾಗಲೇ ಸ್ಥಳೀಯ ಸಂಸ್ಥೆಗಳು ಈ ಎಲ್ಲಾ ಷರತ್ತುಗಳನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಸೂಚಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









