ಮಂಗಳೂರು : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಅಥವಾ ಕುಂದಾಪುರ ಕ್ಷೇತ್ರಗಳ ಪೈಕಿ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿ ಭಾರೀ ಲಾಭಿ ನಡೆಸುತ್ತಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಾಜಿ ಶಾಸಕ ಗೋಪಾಲ ಪೂಜಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡಿದ್ದು, ಪರಿಣಾಮವಾಗಿ ಪಕ್ಷ ಉಡುಪಿ ಜಿಲ್ಲೆಯಲ್ಲಿ ನಾವಿಕನಿಲ್ಲದ ಹಡಗಿನಂತಾಗಿದೆ ಎಂಬ ಅಭಿಪ್ರಾಯ ಪಕ್ಷದೊಳಗೆ ವ್ಯಾಪಕವಾಗಿದೆ.
ಎಂ.ಎ.ಗಫೂರ್ ಕೆಪಿಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಳಿಕ ಅವರಿಂದ ತೆರವಾದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬೈಂದೂರಿನ ಮಾಜಿ ಶಾಸಕ, ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮಿ ಯಾಗಿರುವ ಗೋಪಾಲ ಪೂಜಾರಿ ಯವರನ್ನು ನೇಮಕ ಮಾಡಲಾಗಿತ್ತು. ಗೋಪಾಲ ಪೂಜಾರಿ ಕಾಂಗ್ರೆಸ್ ಜಿಲ್ಲಾ ಧ್ಯಕ್ಷರಾದ ಬಳಿಕ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು ಪಕ್ಷದ ಕಾರ್ಯಕರ್ತರ ಪರಿಸ್ಥಿತಿ. ಗಫೂರ್ ಆದರೂ, ಯಾವಾಗ ಬೇಕಾದರೂ ಕಾರ್ಯಕರ್ತರ ಕೈಗೆ ಸಿಗುತ್ತಿದ್ದರು. ಪಕ್ಷದ ಸಣ್ಣ – ದೊಡ್ಡ ಎಂಬ ಬೇಧವಿಲ್ಲದೆ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಾಗುತ್ತಿದ್ದರು. ಆದರೆ, ಗೋಪಾಲ ಪೂಜಾರಿ ಜಿಲ್ಲಾಧಕ್ಷರಾದ ಬಳಿಕ ಅವರು ಜಿಲ್ಲೆಗೆ ಮತ್ತು ಪಕ್ಷದ ಕಾರ್ಯಕ್ರಮಗಳಿಗೆ ಅಪರೂಪದ ಅತಿಥಿಯಾಗಿ ಹೋದರು.
ಇತ್ತೀಚೆಗೆ ಗೋಪಾಲ ಪೂಜಾರಿ ಯವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವ ಉಸಾಬರಿ ನನಗೆ ಬೇಡ. ಮುಂದಿನ ಚುನಾವಣೆಯಲ್ಲಿ ಬೈಂದೂರು ಅಥವಾ ಕುಂದಾಪುರದಲ್ಲಿ ಶಾಸಕನಾಗಬೇಕು. ಅದಕ್ಕಾಗಿ ತನ್ನ ಅಲ್ಪ ಸ್ವಲ್ಪ ಸಮಯವನ್ನಾದರೂ ತಾನು ಈ ಎರಡೂ ಕ್ಷೇತ್ರಗಳಲ್ಲಿ ಹಾಕಬೇಕು ಎಂಬ ಸ್ವ ಉದ್ಧೇಶದಿಂದ ಪೂಜಾರಿ ಯವರು ಜಿಲ್ಲಾಧಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದರೆ, ಇವರ ರಾಜೀನಾಮೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಾ.ಜಿ. ಪರಮೇಶ್ವರ್ ಅಂಗೀಕಾರ ಮಾಡಿಲ್ಲ.
ಗೋಪಾಲ ಪೂಜಾರಿಯವರ ರಾಜೀನಾಮೆಯನ್ನು ಕೆಪಿಸಿಸಿ ಅಂಗೀಕಾರ ಮಾಡದ ಕಾರಣಕ್ಕೇ ಜಿಲ್ಲೆಯಲ್ಲಿ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರು ಅತಂತ್ರರಾಗಿದ್ದಾರೆ. ಒಂದು ಪ್ರತಿಭಟನೆ, ಧರಣಿ, ಕಾರ್ಯಕ್ರಮ ಹಮ್ಮಿಕೊಳ್ಳಲು ಸಹ ಹಿಂದೆ ಮುಂದೆ ನೋಡುವಂತಾಗಿದೆ.
ತಾನು ರಾಜೀನಾಮೆ ನೀಡಿದ್ದೇನೆ ಎಂದು ಗೋಪಾಲ ಪೂಜಾರಿ ಸುಮ್ಮನಾಗಿದ್ದಾರೆ. ಅವರು ಇದೇ ಕಾರಣಕ್ಕೆ ಜಿಲ್ಲಾ ಕಾಂಗ್ರೆಸ್ ಬಗ್ಗೆ ಕಿಂಚಿತ್ತೂ ಗಮನ ಕೊಡುತ್ತಿಲ್ಲ. ಅತ್ತ ತಾನು ಪೂಜಾರಿಯವರ ರಾಜೀನಾಮೆಯನ್ನು ಅಂಗೀಕಾರ ಮಾಡಿಲ್ಲ.
ಇದರಿಂದಾಗಿ ಉಡುಪಿ ಜಿಲ್ಲೆಯ ಕಾಂಗ್ರೆಸ್ ನ ಇತರ ನಾಯಕರು ಹಾಗೂ ಕಾರ್ಯಕರ್ತರು ಯಜಮಾನನಿಲ್ಲದ ಮನೆಯ ಸದಸ್ಯರಂತಾಗಿ ಹೋಗಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪಕ್ಷದಲ್ಲಿ ನಾಯಕರಿಗೇನೂ ಕೊರತೆಯಿಲ್ಲ. ಕಳೆದ ಹಲವಾರು ದಶಕಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ, ಈಗಲೂ ಮಾಡುತ್ತಿರುವ ಹಲವರು ಇದ್ದಾರೆ. ಇವರಲ್ಲಿ ಯಾರನ್ನಾದರೂ ಒಬ್ಬರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರೂ ಜಿಲ್ಲಾ ಕಾಂಗ್ರೆಸ್ ನ ಅತಂತ್ರತೆ ಮಾಯವಾಗಬಹುದು. ಆದರೆ, ಈ ತುರ್ತು ಅಗತ್ಯದ ಕಡೆಗೆ ಪಕ್ಷದ ಉನ್ನತ ಯಾವೊಬ್ಬ ನಾಯಕನೂ ಗಮನ ಹರಿಸುತ್ತಿಲ್ಲ ಎಂಬ ಅಸಮಾಧಾನ ಪಕ್ಷದೊಳಗೆ ಇದೀಗ ವ್ಯಾಪಕವಾಗಿ ಹರಡತೊಡಗಿದೆ.
ಗೋಪಾಲ ಪೂಜಾರಿಯವರು ಜಿಲ್ಲಾಧಕ್ಷರಾಗಿದ್ದಾಗಲೂ ಅವರು ಕಡಿದು ಕಟ್ಟೆ ಹಾಕಿದ್ದೇನೂ ಇಲ್ಲ. ಅವರು ಬೆಂಗಳೂರಿನಲ್ಲಿ ತಮ್ಮ ಹೊಟೇಲ್ ಉದ್ಯಮವನ್ನು ನೋಡಿಕೊಂಡಿದ್ದುದೇ ಹೆಚ್ಚು. ಆದರೆ, ಜಿಲ್ಲೆಯಲ್ಲೇನಾದರೂ ಕಾರ್ಯಕ್ರಮ ಸಂಘಟಿಸಲು ಕೇಳಿದಾಗ, ಒಪ್ಪಿಗೆಯ ಮುದ್ರೆಯನ್ನಾದರೂ ಕೊಡುತ್ತಿದ್ದರು. ಇದೀಗ ಅದೂ ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಎಂಥ ಶೋಚನೀಯ ಪರಿಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದರೆ, ಪಕ್ಷದ ಕೋಟ ಬ್ಲಾಕ್ ಸಮಿತಿ ಕಾರ್ಯದರ್ಶಿ ವಂಡಾರು ವಾಸುದೇವ ಅಡಿಗ ಬರ್ಬರವಾಗಿ ಕೊಲೆಯಾಗಿ ಹದಿನೈದು ದಿನಗಳು ಕಳೆದರೂ ಇನ್ನೂ ಸಹ ಪಕ್ಷ ಒಂದೇ ಒಂದು ಪ್ರತಿಭಟನಾ ಕಾರ್ಯಕ್ರಮ ನಡೆಸಿಲ್ಲ. ನಡೆಸುವ ಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಇಲ್ಲ. ಒಬ್ಬ ಬ್ಲಾಕ್ ಸಮಿತಿ ಪದಾಧಿಕಾರಿಗೆ ಸತ್ತ ಬಳಿಕ ಈ ಸ್ಥಿತಿಯಾದರೆ ಇನ್ನು ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ಜಿಲ್ಲಾ ಕಾಂಗ್ರೆಸ್ ಯಾವ ರೀತಿಯ ಆಸಕ್ತಿ, ಕಾಳಜಿ ತೋರಿಸಬಹುದು ಎನ್ನುವುದು ಸಾಮಾನ್ಯ ಕಾರ್ಯಕರ್ತರು ಈಗ ಹಾದಿಬೀದಿಯಲ್ಲಿ ಕೇಳುತ್ತಿರುವ ಪ್ರಶ್ನೆಯಾಗಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಂಘಟಿಸಿದ ಸಮಾವೇಶದಲ್ಲಿ, ಅಡಿಗ ಕೊಲೆ ಕೇಸನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒಂದು ನಿರ್ಣಯ, ಅಡಿಗ ಕೊಲೆಯ ಹಿಂದೆ ಬಿಜೆಪಿ ಇದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮದ್ವರಾಜ್ ನೀಡಿದ ಹೇಳಿಕೆ ಇವೆರಡನ್ನು ಬಿಟ್ಟರೆ ವಾಸುದೇವ ಅಡಿಗರ ಕೊಲೆಗೆ ಒಂದು ರಾಷ್ಟ್ರೀಯ ಪಕ್ಷವಾಗಿ ಮಾಡಿದ್ದು ಶೂನ್ಯವೇ. ಇದುವರೆಗೂ ಈ ಬಗ್ಗೆ ಏಐಸಿಸಿ ನಾಯಕರಾದ ಆಸ್ಕರ್ ಫರ್ನಾ ಂ ಡಿಸ್, ವಿನಯ ಕುಮಾರ್ ಸೊರಕೆ, ಜನಾರ್ದನ ಪೂಜಾರಿ ಸಹಿತ ಯಾರೊಬ್ಬರೂ ಒಂದೇ ಒಂದು ಮಾತನ್ನೂ ಆಡದೇ ಇರುವುದು ಅನೇಕ ಅನುಮಾನಗಳಿಗೆ ಕಾರಣ ವಾಗಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷತೆಗೆ ಗೋಪಾಲ ಪೂಜಾರಿ ನೀಡಿದ ರಾಜೀನಾಮೆ ವಿಚಾರ ಪಕ್ಷದೊಳಗೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪಕ್ಷದ ಹೈಕಮಾಂಡ್ ನ ಮುಂದಿನ ನಡೆ ಏನಾಗಿರಬಹುದು ಎಂಬುದನ್ನು ಕಾರ್ಯ ಕರ್ತರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
Click this button or press Ctrl+G to toggle between Kannada and English