ಮಂಗಳೂರು: ನಗರದ ಪುರಭವನದ ಬಳಿ ಭಾನುವಾರ ರಜಾದಿನ ವ್ಯಾಪಾರ ಮಾಡುವ ಸಂಡೆ ಬಜಾರ್ ವ್ಯಾಪಾರಿಗಳ ವಿರುದ್ಧ ನಗರಪಾಲಿಕೆ ಕಾರ್ಯಾಚರಣೆ ಮುಂದುವರಿಸಿದೆ.ಇಂದು ಬೀದಿವ್ಯಾಪಾರಿಗಳು ವ್ಯಾಪಾರ ಆರಂಭಿಸಲು ಮುಂದಾಗುತ್ತಿದ್ದಂತೆ ನಗರಪಾಲಿಕೆ ಆಯುಕ್ತರು ಕಾರ್ಯಾಚರಣೆ ಆರಂಭಿಸಲು ಆದೇಶ ನೀಡಿದರು.
ಪಾಲಿಕೆ ಆಯುಕ್ತರ ಆದೇಶಕ್ಕೆ ಬೀದಿ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿ ಪಾದಚಾರಿಗಳ ಓಡಾಟಕ್ಕೆ ಬೇಕಾದಷ್ಟು ಜಾಗ ಇದ್ದರೂ ತೆರವುಗೊಳಿಸುವುದು ಸರಿಯಲ್ಲ ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಆಯುಕ್ತರು ಧಾಳಿ ಮುಂದುವರಿಸಿದಾಗ ಬೀದಿಬದಿ ವ್ಯಾಪಾರಿಗಳು ಘೋಷಣೆ ಕೂಗುತ್ತ ರಸ್ತೆ ತಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ಧೇಶಿಸಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ, ಪಾಲಿಕೆ ಆಯುಕ್ತರು ಹಠಮಾರಿ ಧೋರಣೆ ತಳೆಯುತ್ತಾ ಬಡವರ ಮೇಲೆ ಸವಾರಿ ಮಾಡುವುದೇ ದೊಡ್ಡ ಸಾಧನೆ ಎಂದು ಭಾವಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬೀದಿ ವ್ಯಾಪಾರಿಗಳ ಕಾನೂನನ್ನು ಅನುಷ್ಠಾನ ಮಾಡದೆ ಧಾಳಿ ಮಾಡುತ್ತಿರುವುದು ಆಶ್ಚರ್ಯ ಉಂಟಾಗಿದೆ ಎಂದು ಅವರು ಹೇಳಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಪಾಲಿಕೆ ಅಧಿಕಾರಿಗಳು ಬಡವರ ಮೇಲೆ ಕನಿಷ್ಠ ಸೌಜನ್ಯ ತೋರಿಸದೆ ಅಮಾನವೀಯವಾಗಿ ಧಾಳಿ ನಡೆಸಿ ಅವರ ಸರಕುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಬೀದಿಬದಿ ವ್ಯಾಪಾರಿ ಸಂಘಟನೆಗಳ ಪ್ರಮುಖರಾದ ಮುಜಾಫರ್ ಅಹ್ಮದ್, ಸಂತೋಷ್ ಆರ್. ಎಸ್, ಮೊಹಮ್ಮದ್ ಮುಸ್ತಫಾ, ಅಬ್ದುಲ್ ರಹಿಮಾನ್ ಅಡ್ಯಾರ್, ವಿಜಯ್ ಜೈನ್, ಹಂಝ ಮೊಹಮ್ಮದ್, ಎಂ.ಎನ್ ಶಿವಪ್ಪ, ನೌಶಾದ್ ಉಳ್ಳಾಲ, ಶಿವಾನಂದ ನಾಯ್ಕ್, ಪಕೀರ ನಾಯ್ಕ್, ನಾಗರಾಜ್, ಹನುಮಂತ, ಜ್ಯೋತಿಬಾಯಿ, ಲಕ್ಕಮ್ಮ, ಸಯ್ಯದ್ ಸಾದಿಕ್, ಅಶ್ರಫ್, ನೌಶಾದ್ ಕಣ್ಣೂರ್, ರಫೀಕ್ ಪಾಂಡೇಶ್ವರ,ಜನವಾದಿ ಮಹಿಳಾ ಸಂಘಟನೆ ನಗರ ಕಾರ್ಯದರ್ಶಿ ಯೋಗೀತಾ ಸುವರ್ಣ ಮುಂತಾದವರು ಉಪಸ್ಥಿತರಿದ್ದರು
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










