ಬೆಂಗಳೂರು : “ಬಹಳ ವರ್ಷಗಳಿಂದ ನನಗೆ ಚಿರಪರಿಚಿತರಾದ ಮಾಜಿ ಸಚಿವ ನಾಗೇಶ್ ಅವರು ಮಂತ್ರಿಗಳಾಗಿ , ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಉತ್ತಮ ಮಾಡಿದ್ದರು. ಅವರೊಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದರು” ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಮಾಜಿ ಸಚಿವ ಬಿ ಸಿ.ನಾಗೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು ತರಲು ನಾಗೇಶ್ ಬಹಳ ಪ್ರಯತ್ನಿಸಿದರು. ನೊಣವಿನಕೆರೆಗೆ ಭೇಟಿ ನೀಡಿದಾಗಲೆಲ್ಲ ನೊಣವಿನಕೆರೆ ಮಠದ ಎಲ್ಲಾ ಕಾರ್ಯಕ್ರಮಗಳಲ್ಲಿ ನನ್ನೊಂದಿಗೆ ಪಾಲ್ಗೊಳ್ಳುತ್ತಿದ್ದರು. ಎಲ್ಲಾ ಸಂದರ್ಭದಲ್ಲಿಯೂ ಸಹಕಾರಿಯಾಗಿದ್ದರು” ಎಂದು ಸ್ಮರಿಸಿದರು.
ಕುಟುಂಬದವರಿಗೆ ಸಿಎಂ ಸಾಂತ್ವನ
“ನಾಗೇಶ್ ಅವರ ಕುಟುಂಬದವರು ಧೈರ್ಯ ಕಳೆದುಕೊಳ್ಳಬಾರದು. ಬದುಕು ಮತ್ತು ಸಾವು ಯಾರ ಕೈಯಲ್ಲಿಯೂ ಇಲ್ಲ. ಇದು ಪ್ರಕೃತಿಯ ನಿಯಮ. ಈ ನಿಯಮದೊಳಗೆಯೇ ನಾವು ಕೆಲಸ ಮಾಡಬೇಕಾಗುತ್ತದೆ. ನಾಗೇಶ್ ಅವರು ಮಾಡಿದ ಒಳ್ಳೆಯ ಕೆಲಸಗಳು ಇವತ್ತಿಗೂ ಇವೆ. ಅವರ ಕ್ಷೇತ್ರದಲ್ಲಿ ಹೆಚ್ಚಿನ ಜನಸಂಖ್ಯೆ ಇಲ್ಲದಿದ್ದರೂ ಅಲ್ಲಿ ಅಪಾರವಾದ ವಿಶ್ವಾಸ ಗಳಿಸಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದರು.
ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
“ನಾಗೇಶ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವ ಮೂಲಕ ಅವರಿಗೆ ಸೂಕ್ತ ರೀತಿಯಲ್ಲಿ ಗೌರವ ಸಲ್ಲಿಸಲಿದೆ. ನಾಗೇಶ್ ಅವರ ಕುಟುಂಬ ವರ್ಗ, ಬಂಧುಗಳು, ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.
“ದೆಹಲಿಯಲ್ಲಿ ಸಭೆಗೆ ಹಾಗೂ ನಾಳೆ ತಮಿಳುನಾಡಿನಲ್ಲಿ ಗೃಹ ಸಚಿವರು ಕರೆದಿರುವ ಸಭೆಯಲ್ಲಿ ಭಾಗಿಯಾಗಬೇಕಾಗಿರುವುದರಿಂದ ವಿಧಾನಮಂಡಲದಲ್ಲಿ ಅವರಿಗೆ ಇಂದು ನುಡಿ ನಮನಗಳನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









