ಮೂಡಬಿದಿರೆ :ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾದ ಆಳ್ವಾಸ್ ನುಡಿಸಿರಿಯ ಮೊದಲದಿನವಾದ ಶುಕ್ರವಾರ ಸಂಜೆ ವಿದ್ಯಾಗಿರಿ ಸುಂದರಿ ಆನಂದ್ ಆಳ್ವ ಅವರಣದಲ್ಲಿ 5 ವೇದಿಕೆಯಲ್ಲಿ ಏಕಕಾಲದಲ್ಲಿ ನಡೆದ ನೃತ್ಯ-ಗಾನ ವೈಭವ ಕಲಾ ರಸಿಕರನ್ನು ರೋಮಾಂಚನಗೊಳಿಸಿತು. 5 ವೇದಿಕೆಗಳಲ್ಲಿ ಒಂದಾದ ರತ್ನಾಕರವರ್ಣಿ ವೇದಿಕೆಯಲ್ಲಿ ಮೈಸೂರಿನ ವಿದುಷಿ ಕೃಪಾ ಪಡ್ಕೆ ಮತ್ತು ತಂಡದವರಿಂದ ನಡೆದ ವಂದೇ ಮಾತರಂ ನೃತ್ಯ ರೂಪಕವು ಭಾರತೀಯರ ಏಕತೆಯ ಮಂತ್ರ ಮತ್ತು ಈ ಏಕತೆಯನ್ನು ಮುರಿಯಲು ಬ್ರಿಟಿಷರು ಮಾಡಿದ ಕುತಂತ್ರಗಳನ್ನು ಮನೋಜ್ಞವಾಗಿ ಬಿಂಬಿಸಿತು. ಚಂದ್ರಶೇಖರ್ ಕೆ.ಎಸ್ ರಚನೆ, ಕೃಪಾ ಪಡ್ಕೆ ಅವರ ಸಂಯೋಜನೆಯಲ್ಲಿ ಈ ನೃತ್ಯ ರೂಪಕವನ್ನು 25 ಕಲಾವಿದರು ಸುಮಾರು ಒಂದು ಗಂಟೆಗಳ ಕಾಲ ಸಾದರಪಡಿಸಿದರು.
ಡಾ.ಕೊಯಿರಾ ಎನ್. ಬಾಳೆಪುಣಿ ವೇದಿಕೆಯಲ್ಲಿ ಕೆ.ವಿ.ರಮೇಶ್ ನಿರ್ದೇಶನದಲ್ಲಿ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದವರಿಂದ ನರಕಾಸುರ ವಧೆ, ಗರುಡಗರ್ವ ಬೊಂಬೆಯಾಟ ಕಾರ್ಯಕ್ರಮವು ಗಮನ ಸೆಳೆಯಿತು. ಇದಕ್ಕೂ ಮೊದಲು ಇದೇ ವೇದಿಕೆಯಲ್ಲಿ ಸೇರಾಜೆ ಕು.ನಯನಗೌರಿ ಅವರಿಂದ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮಹಾತ್ಮೆ ಹರಿಕಥೆ ನಡೆಯಿತು.
ಕೆ.ವಿ ಸುಬ್ಬಣ್ಣ ರಂಗ ಮಂದಿರದಲ್ಲಿ ನಾಡಿನ ಪ್ರಸಿದ್ಧ ಗಾಯಕರಾದ ಶಂಕರ್ ಶಾನುಭಾಗ್, ರಮೇಶ್ಚಂದ್ರ ,ಕೆ.ಎಸ್ ಸುರೇಖ, ಮೃತ್ಯುಂಜಯ ದೊಡ್ಡವಾಡ,ಸುಪ್ರಿಯಾ ರಘನಂದನ, ಸ್ಪರ್ಶ ಆರ್.ಕೆ, ಸಂಗೀತಾ ಬಾಲಚಂದ್ರ ಮೊದಲಾದವರ ಮಧುರ ಕಂಠದಿಂದ ಹೊರಹೊಮ್ಮಿದ ಸಂಗೀತ ರಸಮಂಜರಿ ಸಂಗೀತ ಪ್ರೇಮಿಗಳನ್ನು ಮನಸೂರೆಗೊಳಿಸಿದರೆ, ಇದೇ ವೇದಿಕೆಯಲ್ಲಿ ನಡೆದ ಅಭಿಜ್ಞಾನ ಶಾಕುಂತಲಾ ನಾಟಕ ನೋಡುಗರನ್ನು ನಾಟಕ ಲೋಕದಲ್ಲಿ ತೇಲಾಡಿಸಿತು.
ಕು.ಶಿ. ಹರಿದಾಸ ಭಟ್ಟ ವೇದಿಕೆಯಲ್ಲಿ ಗುರು ಸಂಜೀವ ಸುವರ್ಣ ನಿರ್ದೇಶನದಲ್ಲಿ ಉಡುಪಿ ಯಕ್ಷರಂಗದವರಿಂದ ನಳ ಕಾರ್ಕೋಟಕ, ವಿದುಷಿ ವೀಣಾ ಸಾಮಗ ಅವರ ನಿರ್ದೇಶನದಲ್ಲಿ ಉಡುಪಿಯ ಶ್ರೀ ರಾಧಾಕೃಷ್ಣ ನೃತ್ಯ ನಿಕೇತನದ ವತಿಯಿಂದ ಕೂಚುಪುಡಿ ನೃತ್ಯ ಮತ್ತು ಭಕ್ತ ಕನಕ ನೃತ್ಯರೂಪಕ ನಡೆಯಿತು. ಹಾಗೆ ಕಾರ್ಕಳ ಬಿ.ಗಣಪತಿ ಪೈ ವೇದಿಕೆಯಲ್ಲಿ ಮಂಗಳೂರಿನ ಪ್ರಿಯಾಂಕ ಕೆ.ಪಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಬಿ.ಎಚ್.ತನ್ವಿರಾವ್ ಅವರಿಂದ ಭರತನಾಟ್ಯ ಹಾಗೂ ಪ್ರಕ್ಷಿಲಾ ಜೈನ್ ಅವರಿಂದ ನಡೆದ ಭರತಾಂಜಲಿ ನೃತ್ಯರೂಪಕ ಕಲಾಪ್ರೇಮಿಗಳ ಮನಗೆದ್ದಿತು. ಒಟ್ಟು 5 ವೇದಿಕೆಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಕಲಾಪ್ರೇಮಿಗಳನ್ನು ರೋಮಾಂಚನಗೊಳಿಸಿದವು.
Click this button or press Ctrl+G to toggle between Kannada and English