ಮಂಗಳೂರು : ಸೋಮವಾರ ನಗರದ ಸಂಘ ನಿಕೇತನದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಆದಿಚುಂಚನಗಿರಿಯ ಮಠಾಧೀಶ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಗೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದ್ದು ಸಭೆಯಲ್ಲಿ ಭಾಗವಹಿಸಿದ ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಮಾತನಾಡಿ, ಸಮಾಜದ ನಾನಾ ಕ್ಷೇತ್ರಗಳಲ್ಲಿ ಬದಲಾವಣೆ ತಂದ ಬಾಲಗಂಗಾಧರನಾಥ ಸ್ವಾಮೀಜಿ ನಮ್ಮಿಂದ ದೂರವಾದರೂ ಅವರ ಚೈತನ್ಯ ಸಮಾಜದಲ್ಲಿ ಸದಾ ಉಳಿಯಲಿದೆ. ಗ್ರಾಮೀಣ ಭಾಗದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಿದ ಅವರು,
ಧಾರ್ಮಿಕ ಕಾರ್ಯಗಳಿಗೆ ಉತ್ತೇಜನ ನೀಡಿದ್ದರು ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಡಾ.ಬಾಲಗಂಗಾಧರನಾಥ ಸ್ವಾಮೀಜಿ ಆದಿಚುಂಚನಗಿರಿ ಮಠವನ್ನು ಶ್ರೀಮಂತಗೊಳಿಸುವುದರೊಂದಿಗೆ ಶಿಕ್ಷಣದ ಮೂಲಕ ಸಮಾಜವನ್ನೂ ಹೊಸ ದಿಕ್ಕಿನೆಡೆಗೆ ಸಾಗಿಸಿ ಬಹುದೊಡ್ಡ ಸಾಧನೆ ಮಾಡಿದ್ದರು ಎಂದರು.
ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಆರೆಸ್ಸೆಸ್ ಮಹಾನಗರ ಸಂಘ ಚಾಲಕ ದಾಮೋದರ ನಿಸರ್ಗ, ಮನೋಹರ ತುಳಜಾರಾಂ, ಕೃಷ್ಣಮೂರ್ತಿ, ಜಗದೀಶ್ ಶೇಣವ, ಶ್ರೀಧರ ಭಟ್, ಶ್ರೀಕರ ಪ್ರಭು, ಮೂಡಾ ಅಧ್ಯಕ್ಷ ರಮೇಶ್ ಮತ್ತಿತರರು ಪುಷ್ಪನಮನ ಸಲ್ಲಿಸಿದರು.
Click this button or press Ctrl+G to toggle between Kannada and English