ಮಂಗಳೂರು : ಸುಳ್ಯದ ಕ್ಯಾಂಪಸ್ ರಸ್ತೆಯ ವಿವೇಕಾನಂದ ಸರ್ಕಲ್ ಬಳಿ ಬೆಳಗ್ಗಿನ ಜಾವ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದು, ಅವರಿಂದ ಕಾರು ಸಹಿತ ೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಕುರುಂಜಿಭಾಗ್ ದೇವರಕಳಿಯ ನಿವಾಸಿ ತೀರ್ಥಪ್ರಸಾದ್(೨೧), ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಇರ್ಫಾನ್ (೨೦) ಮತ್ತು ಜೂನಿಯರ್ ಕಾಲೇಜು ನಿವಾಸಿ ವಿನೋದ್(೨೩) ಬಂಧಿತರು. ಈ ಪ್ರಕರಣದ ಪ್ರಮುಖ ಆರೋಪಿ ಕಾಸರಗೋಡಿನ ಚೆರ್ಕ ಎಂಬವನು ತಲೆಮರೆಸಿಕೊಂಡಿದ್ದಾನೆ.
ಸುಳ್ಯದ ಕ್ಯಾಂಪಸ್ ರಸ್ತೆಯ ವಿವೇಕಾನಂದ ಸರ್ಕಲ್ ಬಳಿ ಮುಂಜಾನೆ ೫ ಗಂಟೆ ಸುಮಾರಿಗೆ ತೀರ್ಥಪ್ರಸಾದ್ ಎಂಬವರಿಗೆ ಸೇರಿದ ವ್ಯಾಗನರ್ ಕಾರೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಅಡಿಷನಲ್ ಎಸ್ಪಿ ಸದಾನಂದ ಪರ್ಣೆಕರ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಆರೋಪಿಗಳಿಂದ ೩೦೦ ಗ್ರಾಂ ಗಾಂಜಾ, ೩ ನೋಕಿಯಾ ಮೊಬೈಲ್, ೫೫೦ ರೂಪಾಯಿ ನಗದು ಮತ್ತು ಕಾರು ಸಹಿತ ಸುಮಾರು ೫ ಲಕ್ಷ ರೂಪಾಯಿ ಮೌಲ್ಯದ ಸೊತ್ತು ಮತ್ತು ಗಾಂಜಾ ವಶಪಡಿಸಲಾಗಿದೆ.
Click this button or press Ctrl+G to toggle between Kannada and English