ಚಿಕ್ಕಮಗಳೂರಿನ ಕಡೂರು ಬಳಿ ರಸ್ತೆ ಅಪಘಾತ ಯುವ ವರದಿಗಾರ ಮೃತ್ಯು

11:37 AM, Friday, February 22nd, 2013
Share
1 Star2 Stars3 Stars4 Stars5 Stars
(No Ratings Yet)
Loading...

Sanath Raoಮೂಡುಬಿದಿರೆ : ಚಿಕ್ಕಮಗಳೂರಿನ ಕಡೂರು ರಸ್ತೆಯಲ್ಲಿ ಗುರುವಾರ ಸಂಜೆ ನಡೆದ ಅಪಘಾತವೊಂದರಲ್ಲಿ ಮೂಡುಬಿದಿರೆ ಅಲಂಗಾರು ನಿವಾಸಿ, ದಾವಣಗೆರೆ ಟಿವಿ9 ಸುದ್ದಿವಾಹಿನಿಯ ವರದಿಗಾರ ರಾದ ಸನತ್ ರಾವ್(23) ಮೃತಪಟ್ಟಿದ್ದಾರೆ

ಸನತ್ ದಾವಣಗೆರೆಯಿಂದ ಮೂಡುಬಿದಿರೆಗೆ ತನ್ನ ಬೈಕ್‌ನಲ್ಲಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಲ್ಟೋ ಕಾರಿಗೆ ಢಿಕ್ಕಿಯಾಗಿ ತೀವ್ರ ಗಾಯಗೊಂಡ ಇವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸನತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮೂಡುಬಿದಿರೆ ಕಡಲಕೆರೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಜಯರಾಮ ರಾವ್ ಹಾಗೂ ಕಲ್ಲಮುಂಡ್ಕೂರ್ ನ ಸಿ.ಆರ್.ಪಿ ಆಗಿರುವ ಜ್ಯೋತಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಕಿರಿ ಮಗನಾಗಿರುವ ಸನತ್ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ತನ್ನ ಪದವಿ ಶಿಕ್ಷಣವನ್ನು ಪುರೈಸಿ ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.

ಸನತ್ ರಾವ್ ಆಳ್ವಾಸ್ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ‘ದೂರ ತೀರ ಯಾನ’ ಎಂಬ ಆಲ್ಬಂ ಸಂಗೀತಕ್ಕೆ ನಿರ್ದೇಶನ ನೀಡಿದ್ದರಲ್ಲದೆ, ತನ್ನದೇ ‘ಮನಸ್ವಿ ಕ್ರಿಯೇಷನ್’ನಲ್ಲಿ ಪ್ರತಿಭಾನ್ವಿತ ಬಾಲಕಿ ಮುದ್ದು ತೀರ್ಥಹಳ್ಳಿಯ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಿದ್ದರು. ಉಜಿರೆಯಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿದ್ದಾಗ ಯಲ್ಲಾಪುರದ ಗೌಳಿ ಜನಾಂಗದ ಸ್ಥಿತಿಗತಿ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಿ ಗಮನ ಸೆಳೆದಿದ್ದರು. ಕಳೆದ 6 ತಿಂಗಳಿನಿಂದ ದಾವಣಗೆರೆಯಲ್ಲಿ ಟಿವಿ9 ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English