ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಕಲ್ಲು ವಿಚಾರದಲ್ಲಿ ಕಾನೂನು ಏನು ಹೊಸತು ಅಲ್ಲ, ಈಗಿನ ವ್ಯವಸ್ಥೆಯಿಂದಾಗಿ ಸ್ವಲ್ಪ ಸಮಸ್ಯೆಯಾಗಿದೆ. ಈ ಸಮಸ್ಯೆಯ ಬಗ್ಗೆ ತಾನು ಮುಖ್ಯ ಮಂತ್ರಿಯ ಗಮನ ಸೆಳೆದಿರುವುದಾಗಿ ಮಾಜಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪು ಕಲ್ಲು, ಮರಳು ಸಿಗುತ್ತಿಲ್ಲವೆಂದು ರಸ್ತೆಯಲ್ಲಿ ನಿಂತು ಮಾತನಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯಲ್ಲ. ಆದರೆ ದ.ಕ. ಜಿಲ್ಲೆಯ ಬಿಜೆಪಿ ಶಾಸಕರು ಅದನ್ನೇ ಮಾಡುತ್ತಿದ್ದಾರೆ. ಅವರು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿ, ಕೆಂಪು ಕಲ್ಲು, ಮರಳು ಅಭಾವ ಸೃಷ್ಟಿಗೆ ಹಿಂದಿನ ಬಿಜೆಪಿ ಸರಕಾರ ಕಾರಣ ಎಂದು ಹೇಳಿದರು.
ಮರಳು, ಕೆಂಪುಕಲ್ಲು ಸಿಗದ ಕಾರಣದಿಂದಾಗಿ ಜನ ಸಾಮಾನ್ಯರಿಗೆ, ಕಟ್ಟಡ ಕಾರ್ಮಿಕರಿಗೆ ಸಮಸ್ಯೆ ಆಗಿದೆ. ಕೆಂಪು ಕಲ್ಲಿಗೆ ಕೇರಳದಲ್ಲಿ ರಾಯಲ್ಟಿ ಕಡಿಮೆ ಇದೆ. ನಮ್ಮಲ್ಲಿ ರಾಯಲ್ಟಿ ಜಾಸ್ತಿ ಇದೆ. ಕೆಂಪು ಕಲ್ಲು ರಾಯಲ್ಟಿ ಕೇರಳದಲ್ಲಿ 32 ರೂ., ಇದ್ದರೆ ರಾಜ್ಯದಲ್ಲಿ 280 ರೂ. ಇದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಪರ್ಮಿಟ್ ನೀಡುವ ಕಾರ್ಯ ಆರಂಭಗೊಂಡರೆ ಸಮಸ್ಯೆ ನಿವಾರಣೆಯಾಗಲಿದೆ. ಬಿಜೆಪಿ ಶಾಸಕರಿಗೆ ಜನರ ಕಾಳಜಿ ಇದ್ದರೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿ ಎಂದರು.
ಬಿಜೆಪಿ ಜನಪ್ರತಿನಿಧಿಗಳು ಎಲ್ಲಿ ಮಾತನಾಡಬೇಕೊ ಅಲ್ಲಿ ಮಾತನಾಡದೆ ತಮ್ಮ ಜವಾಬ್ದಾರಿಯನ್ನು ಮರೆತು ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮನಪಾ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷರಾದ ಜೆ.ಅಬ್ದುಲ್ ಸಲೀಮ್, ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ಜಾರ್ಜ್, ನಝೀರ್ ಬಜಾಲ್ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









