ಬೆಂಗಳೂರು :- ರೌಡಿಗಳು ಪುಂಡಾಟ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಬ್ಯಾಂಕ್ ದರೋಡೆ ಪ್ರಕರಣಗಳ ತನಿಖೆಯ ಬಗ್ಗೆ ಅಧಿಕಾರಿಗಳೊಂದಿಗೆ ಕೂಲಂಕುಶವಾಗಿ ಚರ್ಚೆ ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಅವರು ತಿಳಿಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಶಿಕ್ಷೆ ಪ್ರಮಾಣ ಶೇ. 10 ಆಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಲಾಗಿದೆ. ಪೊಲೀಸ್ ನೇಮಕಾತಿ, ಕಾರಾಗೃಹ ಸಿಬ್ಬಂದಿಗಳ ನೇಮಕಾತಿ ಬಗ್ಗೆ ಚರ್ಚಿಸಲಾಗಿದೆ. ನೇಮಕಾತಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ಈಗಾಗಲೇ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪೂರ್ಣಗೊಳಿಸಲಾಗಿದೆ. 402 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ 398 ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ 10 ರಿಂದ 15 ಸಾವಿರ ಪೊಲೀಸ್ ಪೇದೆ ಹುದ್ದೆಗಳು ಖಾಲಿ ಇವೆ. ಕೆಎಸ್ಆರ್ಪಿ, ನಾಗರಿಕ, ಸಶಸ್ತ್ರ ಮೀಸಲು ಪಡೆ ಎಲ್ಲ ನೇಮಕಾತಿಯಾಗಬೇಕು. ಯಾವ ರೀತಿ ನೇಮಕಾತಿ ನಡೆಯಬೇಕು ಎಂಬುದರ ಕುರಿತು ಕೆಲ ಸೂಚನೆಗಳನ್ನು ನೀಡಿದ್ದೇನೆ. ವಿವರವಾದ ಚರ್ಚೆಗಳನ್ನು ಮಾಡಿ ಏನೆಲ್ಲ ಸೂಚನೆಗಳನ್ನು ಕೊಡಬೇಕು, ಕೊಟ್ಟಿದ್ದೇನೆ ಎಂದು ಹೇಳಿದರು.
ಡ್ರಗ್ಸ್ ದಂಧೆಯ ಜೊತೆ ನಂಟು ಹೊಂದಿದ್ದ ಇನ್ಸ್ಪೆಕ್ಟರ್ ಸೇರಿ 11 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ತತಕ್ಷಣ ಇಲಾಖಾ ವಿಚಾರಣೆ ನಡೆಸಿ, ಸರ್ಕಾರಕ್ಕೆ ವರದಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅಧಿಕಾರಿಗಳನ್ನು ವಜಾಗೊಳಿಸುವುದರಿಂದ ಹಿಡಿದು, ಏನೆಲ್ಲ ಪನಿಶ್ಮೆಂಟ್ ಕೊಡಬೇಕು ಎಂಬುದರ ಬಗ್ಗೆ ಇಲಾಖಾ ವಿಚಾರಣೆಯಲ್ಲಿ ಬರುತ್ತದೆ. ಅದಾದ ಬಳಿಕ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಯಾವ ಏರಿಯಾದಲ್ಲಿ ಡ್ರಗ್ಸ್ ದಂದೆ ನಡೆಯುತ್ತದೆ, ಆ ಠಾಣಾ ವ್ಯಾಪ್ತಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹೊಣೆಯಾಗಬೇಕಾಗುತ್ತದೆ ಎಂದು ಹೇಳಲಾಗಿತ್ತು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲಿವರೆಗೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟುಕೊಂಡು ಬಂದಿದ್ದೇವೆ. ಯಾರ ಮೇಲೆ ಎಷ್ಟು ನೋಟೀಸ್ ಕೊಟ್ಟಿದ್ದೀರ? ಎಷ್ಟು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ವರದಿ ಕೊಟ್ಟಿದ್ದೀರಿ ಎಂಬುದನ್ನು ಹಿರಿಯ ಅಧಿಕಾರಿಗಳನ್ನು ಕೇಳಿದ್ದೇನೆ ಎಂದರು.
ಡ್ರಗ್ ಮಾಫಿಯಾ ಸೇರಿದಂತೆ ಇನ್ನಿತರ ಅಕ್ರಮ ದಂಧೆಯ ಜೊತೆ ಪೊಲೀಸರು ಶಾಮಿಲಾಗಿರುವುದು ಕಂಡು ಬಂದರೆ ಇನ್ನುಮುಂದೆ ಎಚ್ಚರಿಕೆ ಕೊಡುವುದಿಲ್ಲ. ಕ್ರಮ ತಡಗೆದುಕೊಳ್ಳುತ್ತೇವೆ. ಎಚ್ಚರಿಕೆ ಕೊಡುವುದೆಲ್ಲ ಒಂದು ಹಂತದಲ್ಲಿ ಮುಗಿದಿದೆ. ಈಗ ಕ್ರಮ ಆಗಬೇಕು.
ಆನೆಕಲ್ ಇನ್ಸ್ಪೆಕ್ಟರ್, ಶಾಸಕರಿಗೆ 80 ಲಕ್ಷ ರೂ. ಕೊಟ್ಟಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದಾನೆ. ಎರಡು ದಿನದಲ್ಲಿ ವರದಿ ನೀಡಬೇಕು. ಶಾಸಕರ ಮೇಲೆ ಆರೋಪ ಮಾಡುತ್ತಾನೆ ಎಂದಾದರೆ, ಈವರೆಗೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ವರದಿ ಕೊಟ್ಟ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









