ಬೆಂಗಳೂರು : ಕರ್ನಾಟಕ ಕಂಡ ಸಜ್ಜನ ರಾಜಕಾರಣಿ, 2 ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ, ಮೂರು ಬಾರಿ ರಾಜ್ಯದ ಗೃಹ ಸಚಿವರಾಗಿ ಮ, ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಜಿ.ಪರಮೇಶ್ವರ ಅವರು ಬೆಂಗಳೂರಿನ ಲೋಕಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಶಿಕ್ಷಣ ಭೀಷ್ಮ ಡಾ. ಎಚ್.ಎಂ.ಗಂಗಾಧರಯ್ಯ ಅವರ ಪುತ್ರರಾಗಿರುವ ಜಿ.ಪರಮೇಶ್ವರ ಅವರು ರಾಜಕೀಯ, ಶಿಕ್ಷಣ, ಕ್ರೀಡೆ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿ ಜನಾನುರಾಗಿ ನಾಯಕರೆನಿಸಿದ್ದಾರೆ.
ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ತತ್ವವನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬರುತ್ತಿರುವ ಜಿ.ಪರಮೇಶ್ವರ ಅವರು ಸಾರ್ವಜನಿಕ ಜೀವನದಲ್ಲಿ ಅಜಾತಶತ್ರುವೆಂದೇ ಗುರುತಿಸಲ್ಪಟ್ಟು ಅಭಿಮಾನಿಗಳಿಂದ ಸವ್ಯಸಾಚಿ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.
ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯಲ್ಲಿ 1951ರ ಆಗಸ್ಟ್ 6ರಂದು ಡಾ. ಹೆಚ್.ಎಂ.ಗಂಗಾಧರಯ್ಯ ಮತ್ತು ಗಂಗಮಾಳಮ್ಮ ದಂಪತಿಯ ದ್ವಿತೀಯ ಪುತ್ರರಾಗಿ ಜನಿಸಿದರು. ತಂದೆ ಹೆಚ್.ಎಂ.ಗಂಗಾಧರಯ್ಯ ಅವರು ಚಿತ್ರ ಕಲಾ ಶಿಕ್ಷಕರು. ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯವರಾಗಿದ್ದಾರೆ. ಮೇಷ್ಟ್ರು ಮಗ ಆಗಿರುವ ಪರಮೇಶ್ವರ ಅವರು ಜೀವನದಲ್ಲಿ ಶಿಸ್ತಿನ ಸಿಪಾಯಿ.
ತುಮಕೂರಿನ ಗೊಲ್ಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದರು. ಬಳಿಕ ಕೃಷಿ ವಿಜ್ಞಾನದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. 1984ರಲ್ಲಿ ಆಸ್ಟ್ರೇಲಿಯಾದ ವೈಟ್ ಅಗ್ರಿಕಲ್ಚರ್ ರೀಸರ್ಚ್ ಇನ್ಸ್ಟಿಟ್ಯೂಟ್ ಯೂನಿವರ್ಸಿಟಿ ಆಫ್ ಅಡಿಲೆಡ್ನಿಂದ ಪಿ.ಎಚ್ಡಿ ಪದವಿಗಳಿಸಿದವರು.
ರಾಜೀವ್ ಗಾಂಧಿ ಮಾರ್ಗದರ್ಶನ:-
ಮಾಜಿ ಪ್ರಧಾನಿ ಭಾರತರತ್ನ ದಿವಂಗತ ರಾಜೀವ್ ಗಾಂಧಿ ಅವರ ಕರೆಗೆ ಓಗೊಟ್ಟು ರಾಜಕೀಯ ಪ್ರವೇಶ ಮಾಡಿದರು. ದೂರದೃಷ್ಟಿಯ ಯುವಕರು ರಾಜಕೀಯಕ್ಕೆ ಬರಬೇಕು. ಉತ್ತಮ ಆಡಳಿತ ನೀಡಬೇಕೆಂದು ಭಾರತದ ಪ್ರಧಾನಿಯಾಗಿದ್ದ ಅವರು ನೀಡಿದ್ದ ರಾಜಕೀಯ ಕರೆಗೆ ಓಗೊಟ್ಟು ರಾಜಕೀಯ ಪ್ರವೇಶ ಮಾಡಿದ ಪರಮೇಶ್ವರ ಅವರು, 1989ರಲ್ಲಿ ಮೊದಲ ಬಾರಿಗೆ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.
ಮೊದಲ ಬಾರಿ ಶಾಸಕರಾಗಿದ್ದ ಅವಧಿಯಲ್ಲೇ ವೀರಪ್ಪ ಮೊಯ್ಲಿ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದರು. 1999 ಮತ್ತು 2004ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಪುನಾರಾಯ್ಕೆಯಾದರು.
ಎಸ್.ಎಂ.ಕೃಷ್ಣ ಸಂಪುಟದಲ್ಲಿ ಉನ್ನತ ಶಿಕ್ಷಣ, ವಾರ್ತಾ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದರು. ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ, 2008ರಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಕ್ಕೂಟದ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ, 2023ರಿಂದ 2026ರವರೆಗೆ ಗೃಹ ಖಾತೆಯನ್ನು ನಿಭಾಯಿಸಿದ್ದಾರೆ.
ಅಕ್ಷರವೇ ಅಸ್ತ್ರ:- 1958ರಲ್ಲಿ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾಗೋಡುವಿನಲ್ಲಿ ಭೂದಾನ ಚಳುವಳಿ ಆರಂಭವಾಗಿತ್ತು. ಇದೇ ವೇಳೆಗೆ ಸರಿಯಾಗಿ ಸರ್ವೋದಯದ ನೇತಾರರಾಗಿದ್ದ ವಿನೋಬಾಭಾವೆಯವರು ಆರಂಭಿಸಿದ ಚಳುವಳಿ ದೇಶದೆಲ್ಲೆಡೆ ಸಂಚರಿಸಿ ತುಮಕೂರಿಗೆ ಬಂದಾಗ ಸುಮಾರು 200 ಮಂದಿ ತಂಡ ಗೊಲ್ಲಹಳ್ಳಿಯ ಗಂಗಾಧರಯ್ಯನವರ ಮನೆಯಲ್ಲಿ ವಾಸ್ತವ್ಯ ಹೂಡಿತ್ತು. ಕಾಕಾತಾಳೀಯ ಎನ್ನುವಂತೆ ವಿನೋಬಾ ಅವರ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯ ಸಂದೇಶವನ್ನು ಸ್ವೀಕರಿಸಿದ ಶಿಕ್ಷಣ ಭೀಷ್ಮ ಹೆಚ್.ಎಂ.ಗಂಗಾಧರಯ್ಯನವರು, ದುರ್ಬಲ ವರ್ಗದ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಚಿಂತಿಸತೊಡಗಿದರು. ಆ ಚಿಂತನೆಯ ಸಾಕಾರ ರೂಪಕವೇ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ.
1959ರಲ್ಲಿ ಉಚಿತ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆರಂಭಿಸಿದರು. ಗೊಲ್ಲಹಳ್ಳಿಯಲ್ಲಿ ಅದೇ ವರ್ಷ ಜೂನ್ ತಿಂಗಳಲ್ಲಿ ಡಾ. ಶಿವಕುಮಾರಸ್ವಾಮಿಗಳಿಂದ ಶ್ರೀ ಸಿದ್ಧಾರ್ಥ ಪ್ರೌಢಶಾಲೆಗೆ ಚಾಲನೆ ದೊರೆಯಿತು. ಮೂವತ್ತೈದು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಪ್ರೌಢ ಶಾಲೆ ರಾಜ್ಯಾದ್ಯಂತ ಕವಲುಗಳಾಗಿ ಟಿಸಿಲೊಡೆದು ರಾಜ್ಯದ ಮೂಲೆಮೂಲೆಗಳಲ್ಲಿ ಶಿಕ್ಷಣದ ಕಂಪು ಪಸರಿಸುತ್ತಿದೆ. ಇದೀಗ ಸ್ವತಂತ್ರ ವಿಶ್ವವಿದ್ಯಾನಿಲಯವಾಗುವ ಮಟ್ಟಕ್ಕೆ ಬೆಳೆದಿದೆ.
2 ಅವಧಿಗೆ ಕೆಪಿಸಿಸಿ ಅಧ್ಯಕ್ಷರು:- ಡಾ. ಜಿ.ಪರಮೇಶ್ವರ ಅವರು, 2010ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡು ಸುಧೀರ್ಘ ಎರಡು ಅವಧಿಗೆ ಪಕ್ಷ ಸಂಘಟಿಸಿದ ಕೀರ್ತಿ ಇವರದ್ದು. ರಾಜ್ಯದಲ್ಲೆಡೆ ಸುತ್ತಿ ಪಕ್ಷ ಸಂಘಟಿಸಿದರು. ‘ಮನೆಮನೆಗೆ ಕಾಂಗ್ರೆಸ್’ ಅಭಿಯಾನದ ಮೂಲಕ 2013ರಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಕಾರಣಕರ್ತರು. 2018ರಲ್ಲಿ ಉಪಮುಖ್ಯಮಂತ್ರಿಗಳಾಗುವ ಮೂಲಕ ಕರ್ನಾಟಕದ 8ನೇ ಡಿಸಿಎಂ ಆಗಿ ಕಾರ್ಯನಿರ್ವಹಣೆ ಮಾಡಿದರು. ಮೂರು ಬಾರಿ ಗೃಹ ಸಚಿವರಾದ ಹೆಗ್ಗಳಿಕೆಯು ಇವರದ್ದಾಗಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗಾಗಿ ‘ಪೊಲೀಸ್ ಗೃಹ ಯೋಜನೆ’ ಮೂಲಕ ಸುಸಜ್ಜಿತ ಮನೆಗಳನ್ನು ಕಲ್ಪಿಸಿದರು. ಪೊಲೀಸ್ ಇಲಾಖೆಯನ್ನು ತಾಂತ್ರಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಸುಧಾರಣೆಗೆ ಪಾತ್ರ ವಹಿಸಿದ್ದಾರೆ.
ಕ್ರೀಡೆಯಲ್ಲೂ ಸಾಧನೆ:-
ಡಾ. ಜಿ.ಪರಮೇಶ್ವರ ಅವರು ಬಹಳ ಕ್ರಿಯಾಶೀಲರು. ವಿದ್ಯಾರ್ಥಿ ಜೀವನದಲ್ಲಿಯೇ ಎನ್ಸಿಸಿ ಸೇರ್ಪಡೆಯಾಗಿದ್ದರು. ಅಲ್ಲದೇ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 10.9 ಸೆಕೆಂಡ್ಗಳಲ್ಲಿ ಓಟವನ್ನು ಪೂರ್ಣಗೊಳಿಸಿ ದಾಖಲೆ ಬರೆದಿದ್ದರು. ಅಂತರ್ ಕಾಲೇಜು, ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿದ್ದರು. ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜಿನ (ಜಿಕೆವಿಕೆ) ಪ್ರತಿನಿಧಿಯಾಗಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದರು.
ಮನೆಮನೆಗೆ ಕಾಂಗ್ರೆಸ್:- ಜಿ.ಪರಮೇಶ್ವರ ಅವರು ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ 8 ವರ್ಷಗಳವರೆಗೆ ಸುಧೀರ್ಘವಾಗಿ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ಧಾರಿ ವಹಿಸಿಕೊಂಡ ಬಳಿಕ ‘ಮನೆಮನೆಗೆ ಕಾಂಗ್ರೆಸ್’ ಅಭಿಯಾನದ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸುವ ಕೆಲಸಕ್ಕೆ ಕೈಹಾಕಿದರು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಾಲುಸಾಲು ಹಗರಣಗಳು, ದುರಾಡಳಿತ, ಭ್ರಷ್ಟಚಾರದ ವಿರುದ್ಧ ಗಟ್ಟಿ ಧ್ವನಿ ಎತ್ತಿದ್ದರು. ಅಂದಿನ ಬಿಜೆಪಿ ಸರ್ಕಾರದ ವೈಫಲ್ಯಗಳು, ದುರಾಳಿಡತವನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹಮತದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಾ. ಜಿ.ಪರಮೇಶ್ವರ ಅವರು ಮಹತ್ವದ ಪಾತ್ರ ವಹಿಸಿದ್ದರು.
ಗ್ಯಾರಂಟಿ ಯೋಜನೆಗಳ ಪರಿಚಯ:- 2023ರ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಪಕ್ಷವು ಜವಾಬ್ದಾರಿ ವಹಿಸಿತು. ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದರು. ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ರವರ ನೇತೃತ್ವದ ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ದೇಶದೆಲ್ಲೆಡೆ ಮನೆ ಮಾತಾಯಿತು.
ಗೃಹ ಇಲಾಖೆ ದೇಶದಲ್ಲೇ ನಂಬರ್ ಒನ್:-
ಇಂಡಿಯಾ ಜಸ್ಟೀಸ್ ರಿಪೋರ್ಟ್ (India Justice Report) ಭಾರತದಲ್ಲಿ ನ್ಯಾಯ ಒದಗಿಸುವ ವ್ಯವಸ್ಥೆ (ಪೊಲೀಸ್, ಜೈಲು, ನ್ಯಾಯಾಂಗ ಮತ್ತು ಕಾನೂನು ನೆರವು) ಹೇಗಿದೆ ಎಂದು ಮೌಲ್ಯಮಾಪನ ಮಾಡುವ ಒಂದು ಪ್ರಮುಖ ರಾಷ್ಟ್ರೀಯ ವರದಿಯಾಗಿದೆ. ಇದರ ಪ್ರಕಾರ ಪೊಲೀಸ್ ವ್ಯವಸ್ಥೆ, ಕಾರಾಗೃಹಗಳು (ಜೈಲು), ನ್ಯಾಯಾಂಗ, ಮತ್ತು ನ್ಯಾಯದಾನದಲ್ಲಿ ದೇಶದಲ್ಲೇ ಕರ್ನಾಟವು ಅಗ್ರಸ್ಥಾನದಲ್ಲಿದೆ. ಇದರ ಹೆಗ್ಗಳಿಕೆ 2023ರಿಂದ 2026ರ ಮೇ ತಿಂಗಳವರೆಗೆ ಗೃಹ ಸಚಿವರಾಗಿ ಇಲಾಖೆಯನ್ನು ಉತ್ತಮವಾಗಿ ಜವಾಬ್ದಾರಿಯನ್ನು ನಿಭಾಯಿಸಿದ ಡಾ. ಜಿ.ಪರಮೇಶ್ವರ ಅವರಿಗೆ ಸಲ್ಲುತ್ತದೆ. ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ “ಮನೆಮನೆಗೆ ಪೊಲೀಸ್” ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಡ್ರಗ್ಸ್ ವಿರುದ್ಧ ಸಮರ:-
ಯುವ ಪೀಳಿಗೆಯ ಭವಿಷ್ಯವನ್ನು ಸರ್ವನಾಶ ಮಾಡುತ್ತಿರುವ ಮಾದಕ ದ್ರವ್ಯ ಹಾವಳಿ ವಿರುದ್ಧ ಸಮರ ಸಾರಿದ್ದಾರೆ. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದಾಗಿ ಪಣ ತೊಟ್ಟಿರುವ ಡಾ. ಜಿ.ಪರಮೇಶ್ವರ ಅವರು, ಡ್ರಗ್ಸ್ ದಂಧೆಯನ್ನು ಬೇರು ಮಟ್ಟದಿಂದ ಸಂಪೂರ್ಣವಾಗಿ ನಾಶ ಪಡಿಸುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ನೂರಾರು ಪ್ರಕರಣಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚುವ ಮೂಲಕ ಡ್ರಗ್ಸ್ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೇ, ಅಮಾಯಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ಸೈಬರ್ ವಂಚಕರ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ.
ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆ:-
ದೇಶದಲ್ಲೇ ಮೊಟ್ಟ ಮೊದಲ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಪರಮೇಶ್ವರ ಅವರು 2023ರಲ್ಲಿ ಗೃಹ ಖಾತೆ ವಹಿಸಿಕೊಂಡ ಬಳಿಕ ಸೈಬರ್ ಕಮಾಂಡ್ ಸೆಂಟರ್ ಸ್ಥಾಪಿಸಿ, ಡಿಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿಯನ್ನು ನೇಮಿಸಿದ್ದಾರೆ.
ನೇಮಕಾತಿಯಲ್ಲಿ ಪಾರದರ್ಶಕತೆ:-
ದೇಶದಲ್ಲೇ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ತನ್ನದೇ ಛಾಪು ಹೊಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಬಹುದೊಡ್ಡ ಹಗರಣದಿಂದ ಕಳಂಕ ಅಂಟಿಕೊಂಡಿತ್ತು. ಕಾಂಗ್ರೆಸ್ ಪಕ್ಷವು ಹೋರಾಟದ ಮೂಲಕ ಪಿಎಸ್ಐ ನೇಮಕಾತಿ ಹಗರಣವನ್ನು ಬಯಲು ಮಾಡಿತ್ತು. ಆಕಾಂಕ್ಷಿಗಳಿಗೆ ಆಗಿದ್ದ ಅನ್ಯಾಯವನ್ನು ತಡೆದರು. ತದನಂತರ ಅಧಿಕಾರಕ್ಕೆ ಬಂದ ಬಳಿಕ ಗೃಹ ಸಚಿವರಾಗಿ 545 ಮತ್ತು 402 ಪಿಎಸ್ಐ ಹುದ್ದೆಗಳ ನೇಮಕಾತಿಯನ್ನು ಪರಮೇಶ್ವರ ಅವರು ಪಾರದರ್ಶಕವಾಗಿ ನಡೆಸಿದರು.
ತಮ್ಮ ಇಡೀ ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆ, ಪಕ್ಷ ನಿಷ್ಠೆ, ಕಳಂಕ ರಹಿತ ಮತ್ತು ಪಾರದರ್ಶಕ ಆಡಳಿತವನ್ನು ಮೈಗೂಡಿಸಿಕೊಂಡಿರುವ ಜಿ.ಪರಮೇಶ್ವರ ಅವರ ಸೌಮ್ಯ ಸ್ವಭಾವದ ನಾಯಕತ್ವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹಾಗೂ ಎಐಸಿಸಿ ವರಿಷ್ಠರಿಗೆ ಮೆಚ್ಚುಗೆ. ಆಡಂಬರ, ಅಬ್ಬರ, ಪ್ರಚಾರದಿಂದ ಸದಾ ದೂರ ಇರುವ ನಾಯಕ. ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಗಳನ್ನು ಚಾಚು ತಪ್ಪದೆ, ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಿಭಾಯಿಸುವ ಛಾಪು ಇವರದ್ದು.
ಮಹಿಳಾ ಸುರಕ್ಷತೆಗೆ ಬೆಂಗಳೂರು ಟಾಪ್ ಸಿಟಿ:- ಚೆನ್ನೈ ಮೂಲದ ಅವತಾರ್ ಗ್ರೂಪ್ ಸಂಸ್ಥೆಯು ಇತ್ತೀಚೆಗೆ ‘ಭಾರತದಲ್ಲಿ ಮಹಿಳೆಯರಿಗಾಗಿ ಅತ್ಯುತ್ತಮ ನಗರಗಳು’ (Top Cities for Women in India) ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಮಹಿಳಾ ಸುರಕ್ಷತೆ, ಗುಣಮಟ್ಟದ ಜೀವನ ಮತ್ತು ಮಹಿಳಾ ಉದ್ಯೋಗಾವಕಾಶಗಳಲ್ಲಿ ನಗರವು ಅಗ್ರಸ್ಥಾನದಲ್ಲಿದೆ. ಸೇಫ್ ಸಿಟಿ (Safe City) ಯೋಜನೆಯಡಿ ಸ್ಥಾಪಿಸಲಾದ ಕಮಾಂಡ್ ಸೆಂಟರ್ ಮೂಲಕ ಬೆಂಗಳೂರು ನಗರದಲ್ಲಿ ಸೇಫ್ಟಿ ಐಲ್ಯಾಂಡ್, ಉನ್ನತ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳ ನಿಗಾವಹಿಸಲಾಗುತ್ತಿದೆ.
ರಾಜಕೀಯದಲ್ಲಿ ಎಲ್ಲವೂ ದಾಖಲೆ:-
ಸತತ 2ನೇ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿ 8 ವರ್ಷ ಸುದೀರ್ಘವಾಗಿ ಪಕ್ಷ ಸಂಘಟನೆಯ ಜವಾಬ್ಧಾರಿಯನ್ನು ಹೊತ್ತು, 2013ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಕಾರಣಕರ್ತರು. 3 ಬಾರಿ ರಾಜ್ಯದ ಗೃಹ ಖಾತೆಯನ್ನು ಉತ್ತಮವಾಗಿ ನಿಭಾಯಿಸಿದ ಖ್ಯಾತಿ ಇವರಿಗೆ ಇದೆ. 2ನೇ ಸಲ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪರಮೇಶ್ವರ ಅವರ ರಾಜಕೀಯ ಹೆಜ್ಜೆ ಗುರುತು:-
√ 1992ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವರು.
√ 1999 ರಿಂದ 2004ರವರೆಗೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ವಾರ್ತಾ ಮತ್ತು ಪ್ರಚಾರ ಖಾತೆ ನಿರ್ವಹಣೆ.
√ 2010 ರಿಂದ 2018ರವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸುದೀರ್ಘವಾಗಿ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತಿದ್ದರು.
√ 2015ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ. ವಿಧಾನ ಪರಿಷತ್ ಸಭಾ ನಾಯಕರಾಗಿ
√ 2015ರಲ್ಲಿ ಮೊದಲ ಬಾರಿಗೆ ಗೃಹ ಖಾತೆಯ ಜವಾಬ್ದಾರಿಯನ್ನು ನಿಭಾಯಿಸಿದರು.
√ 2018 ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಣೆ. ರಾಜ್ಯ ಗೃಹ ಇಲಾಖೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಜವಾಬ್ಧಾರಿ ನಿಭಾಯಿಸಿದ್ದರು.
√2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ, ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದರು. ಗ್ಯಾರಂಟಿ ಯೋಜನೆಗಳು ದೇಶದೆಲ್ಲೆಡೆ ಮನೆ ಮಾತಾಗಿವೆ.
√ 2023ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಸಚಿವರಾಗಿ ಖಾತೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಜನರ ಮೆಚ್ಚುಗೆ.
ಒಟ್ಟು ಆರು ಬಾರಿ ಶಾಸಕರಾಗಿ ಜಿ.ಪರಮೇಶ್ವರ ಆಯ್ಕೆ:-
ಮಧುಗಿರಿ ವಿಧಾನಸಭಾ ಕ್ಷೇತ್ರ (ಮೂರು ಬಾರಿ ಗೆಲುವು)
1) 1989 – ಮೊದಲ ಬಾರಿ ಶಾಸಕರಾಗಿ ಆಯ್ಕೆ
2) 1999- ಎರಡನೇ ಬಾರಿ ದಾಖಲೆಯ ಮತಗಳ ಅಂತರದಿಂದ ಗೆಲುವು
3) 2004- ಮೂರನೇ ಬಾರಿ ಮಧುಗಿರಿಯಿಂದ ಶಾಸಕರಾಗಿ ಆಯ್ಕೆ
ಕೊರಟಗೆರೆ ವಿಧಾನಸಭಾ ಕ್ಷೇತ್ರ (ಮೂರು ಬಾರಿ ಗೆಲುವು):-
4) 2008- ಕ್ಷೇತ್ರ ಮರುವಿಂಗಡಣೆಯ ನಂತರ ಕೊರಟಗೆರೆಯಿಂದ ಮೊದಲ ಬಾರಿ ಗೆಲುವು
5) 2018- ಕೊರಟಗೆರೆಯಿಂದ ಎರಡನೇ ಬಾರಿ ಶಾಸಕರಾಗಿ ಆಯ್ಕೆ
6) 2023- ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿ ಗೆಲುವು
2016ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಮತ್ತು ವಿಧಾನ ಪರಿಷತ್ ಸಭಾ ನಾಯಕರಾಗಿ ಆಯ್ಕೆ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ಟಾಪ್ ಸುದ್ದಿ, ರಾಜಕೀಯ, ಸುದ್ದಿಗಳು









