ಪುತ್ತೂರು : ‘ಅಶೋಕ ಜನಮನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗಳು ಹಾಗೂ ಅದಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಪ್ರತಿಕ್ರಿಯೆಗಳು ಇದೀಗ ಸುದ್ದಿಯ ಕೇಂದ್ರಬಿಂದುವಾಗಿವೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್ಎಸ್ಎಸ್) ನಿಷೇಧ ಮಾಡಿಲ್ಲ ಮತ್ತು ಹೊರಡಿಸಲಾದ ಆದೇಶದಲ್ಲಿ ಯಾವುದೇ ಸಂಘ ಅಥವಾ ಸಂಸ್ಥೆಯ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದರು.
ಮುಖ್ಯಮಂತ್ರಿಯವರ ಈ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಕಿಶೋರ್ ಕುಮಾರ್ ಪುತ್ತೂರು ಅವರು, ಆರ್ಎಸ್ಎಸ್ ಕುರಿತು ತಪ್ಪು ಕಲ್ಪನೆ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎನ್ನುವುದು ಕೇವಲ ಒಂದು ಸಂಘಟನೆಯಲ್ಲ, ಬದಲಿಗೆ ಅದು ದೇಶದ ಭೂಮಿಯೊಡನೆ ಬೆಸೆದುಕೊಂಡಿರುವ, ರಾಷ್ಟ್ರಪ್ರೇಮ, ಶಿಸ್ತು, ಮತ್ತು ಸೇವಾಭಾವನೆಗಳನ್ನು ಬೋಧಿಸುವ ‘ರಾಷ್ಟ್ರಭಕ್ತಿಯ ಚಳುವಳಿ’ಯಾಗಿದೆ. ಇಂತಹ ನೂರು ವರ್ಷಗಳ ಮಹಾನ್ ಸಂಸ್ಥೆಯ ಬಗ್ಗೆ ತಪ್ಪು ಅರ್ಥ ಸೃಷ್ಟಿಸಿ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುವುದು ಕೇವಲ ರಾಜಕೀಯವಲ್ಲ, ಅದು ರಾಷ್ಟ್ರದ ಹಿತದ್ರೋಹ. ಆರ್ಎಸ್ಎಸ್ ಮತ, ಜಾತಿ, ಭಾಷಾ ಭೇದಗಳನ್ನು ಮೀರಿ ‘ನಾವು ಎಲ್ಲರೂ ಭಾರತೀಯರು’ ಎಂಬ ಭಾವನೆ ಬೆಳೆಸಿದೆ. ಇಂತಹ ಸಂಸ್ಥೆಯನ್ನು ರಾಜಕೀಯ ಅಸೂಯೆಯಿಂದ ಬಣ್ಣ ಹಚ್ಚುವುದು ನಿಜವಾದ ರಾಷ್ಟ್ರಪ್ರೇಮಿಗಳ ಗೌರವಕ್ಕೆ ಧಕ್ಕೆಯುಂಟುಮಾಡುತ್ತದೆ. ದೇಶಕ್ಕಾಗಿ ಕೆಲಸಮಾಡುವ ಈ ಸಂಸ್ಥೆಯನ್ನು ದುರುದ್ದೇಶದಿಂದ ಚಿತ್ರಿಸುವವರು ರಾಷ್ಟ್ರಭಕ್ತಿಯ ಅರ್ಥ ಅರಿಯದವರು, ಮತ್ತು ಈ ರೀತಿಯ ಹೇಳಿಕೆಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಸಹನೆ ಹಾಗೂ ಮತಾಂಧತೆಯ ಪ್ರತೀಕ ಎಂದು ಕಿಶೋರ್ ಕುಮಾರ್ ವಾಗ್ದಾಳಿ ನಡೆಸಿದರು.
ಅದೇ ವೇಳೆ, ನಿನ್ನೆ ನಡೆದ ‘ಅಶೋಕ್ ಜನಮನ’ ಕಾರ್ಯಕ್ರಮದ ಅಸಮರ್ಪಕ ಆಯೋಜನೆಯ ಕುರಿತು ಕಿಶೋರ್ ಕುಮಾರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ಮಾನ್ಯ ಅಶೋಕ್ ರೈ ಅವರಿಗೆ ಇಪ್ಪತ್ತು ಸಾವಿರ ಜನರನ್ನು ಸೇರಿಸುವ ಕಾರ್ಯಕ್ರಮವನ್ನು ಹೇಗೆ ನಡೆಸಬೇಕು ಎನ್ನುವ ಅನುಭವವೇ ಇಲ್ಲ ಎನಿಸುತ್ತದೆ. ತಮ್ಮ ಒಣ ಪ್ರತಿಷ್ಠೆಯನ್ನು ತೃಪ್ತಿಪಡಿಸಲು ಮುಗ್ದ ಜನರನ್ನು ಬಳಸಿಕೊಂಡದ್ದು ಬಹುದೊಡ್ಡ ಅಪರಾಧ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯವರನ್ನು ಕರೆಸಿ, ಅವರು ಕಾರ್ಯಕ್ರಮದಿಂದ ತೆರಳುವ ತನಕ ಜನರಿಗೆ ನೀರು, ಆಹಾರ ಕೊಡದೆ ಕೂಡಿಹಾಕಿದ್ದು ದೊಡ್ಡ ನಿರ್ಲಕ್ಷ್ಯ ಮತ್ತು ಮಾನವೀಯತೆಯ ಮೇಲೆ ನಡೆದ ಅವಮಾನ. ಕಾರ್ಯಕ್ರಮದಲ್ಲಿ ಅಸಮರ್ಪಕ ವ್ಯವಸ್ಥೆಯಿಂದಾಗಿ ಸುಮಾರು ಹತ್ತು-ಹನ್ನೊಂದು ಜನರು ಅಸ್ವಸ್ಥಗೊಂಡಿರುವುದು ದುಃಖದ ಸಂಗತಿ. ಮುಖ್ಯಮಂತ್ರಿಯವರ ಮುಂದೆ ಜನಸಾಗರ ಕಾಣಬೇಕು ಎಂಬ ದುರುದ್ದೇಶದಿಂದ ಊಟ ನೀರು ಕೊಡದೆ ಉಸಿರಾಡಲು ಸಮಸ್ಯೆ ಉಂಟಾಗಿ ಜನರಿಗೆ ಅಸ್ವಸ್ಥತೆ ಬಂದಿದೆ. ಸಿದ್ದರಾಮಯ್ಯನವರ ಜೀವಕ್ಕೆ ಎಷ್ಟು ಬೆಲೆ ಇದೆಯೋ, ಪುತ್ತೂರಿನ ಸಾಮಾನ್ಯ ಜನರ ಜೀವಕ್ಕೂ ಅಷ್ಟೇ ಬೆಲೆ ಇದೆ. ಇನ್ನು ಮುಂದೆ ಈ ರೀತಿ ಬೇಜವಾಬ್ದಾರಿತನವನ್ನು ಮಾಡಬಾರದು ಮತ್ತು ಕಾರ್ಯಕ್ರಮಕ್ಕೆ ಜನರನ್ನು ಕರೆದರೆ ಅವರಿಗೆ ರಕ್ಷಣೆ ಕೊಡುವ ಜವಾಬ್ದಾರಿಯೂ ಆಯೋಜಕರದ್ದೇ ಎಂದು ಕಿಶೋರ್ ಕುಮಾರ್ ಎಚ್ಚರಿಕೆ ನೀಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ









