ಮಂಗಳೂರು : ಮೂಲತಃ ಕಾಸರಗೋಡು ಜಿಲ್ಲೆಯ ಎಡನೀರು ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಡಾ.ಶ್ಯಾಮ ಭಟ್ ಹಾವಿನ ವಿಷವನ್ನು ಎರಡನೇ ನಿಮಿಷದಲ್ಲಿ ತಿಳಿದುಕೊಳ್ಳುವ ಸಲುವಾಗಿ ಮೆಡಿಕಲ್ ಕಿಟ್ ತಯಾರಿಸಿದ್ದಾರೆ. ಸ್ನೇಕ್ ವೀನಮ್ ರ್ಯಾಪಿಡ್ ಟೆಸ್ಟ್ ಕಿಟ್ (snake venom rapid test) ಎಂಬ ಹೆಸರಲ್ಲಿ ಇದನ್ನು ಅಭಿವೃದ್ಧಿ ಪಡಿಸಿದ್ದು ಭಾರತ ಸರಕಾರದಿಂದ ಪೇಟೆಂಟ್ ಪಡೆದಿದ್ದಾರೆ.
.ಹಳ್ಳಿಗಳಲ್ಲಿ ಅರಣ್ಯ ಪ್ರದೇಶದ ಅಂಚಿನ ಗ್ರಾಮಗಳಲ್ಲಿ ಹಾವು ಕಚ್ಚಿದರೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪುವ ಸ್ಥಿತಿ ಇಡೀ ದೇಶದಲ್ಲಿದೆ. ಕೆಲವೊಮ್ಮೆ ಯಾವ ಹಾವೆಂದು ತಿಳಿಯದೆ, ಕೆಲವು ಸಂದರ್ಭಗಳಲ್ಲಿ ಕೂಡಲೇ ಆಸ್ಪತ್ರೆಗೆ ಒಯ್ಯಲಾಗದೆ, ಕೆಲವು ಕಡೆ ಹಾವು ಕಚ್ಚಿತು ಎಂಬ ಭಯದಲ್ಲಿ ಜನ ಸಾವನ್ನಪ್ಪುತ್ತಿದ್ದಾರೆ. ಇಂಥ ಸವಾಲನ್ನು ಮೆಟ್ಟಿನಿಲ್ಲ ಬಲ್ಲ ಮೆಡಿಕಲ್ ಕಿಟ್ ಒಂದನ್ನು ಜಗತ್ತಿನಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಬಯೋಟೆಕ್ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಎಡನೀರು ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಡಾ.ಶ್ಯಾಮ ಭಟ್ ಹಾವಿನ ವಿಷವನ್ನು ಎರಡನೇ ನಿಮಿಷದಲ್ಲಿ ತಿಳಿದುಕೊಳ್ಳುವ ಸಲುವಾಗಿ ಮೆಡಿಕಲ್ ಕಿಟ್ ತಯಾರಿಸಿದ್ದಾರೆ. ಸ್ನೇಕ್ ವೀನಮ್ ರ್ಯಾಪಿಡ್ ಟೆಸ್ಟ್ ಕಿಟ್ (snake venom rapid test) ಎಂಬ ಹೆಸರಲ್ಲಿ ಇದನ್ನು ಅಭಿವೃದ್ಧಿ ಪಡಿಸಿದ್ದು ಭಾರತ ಸರಕಾರದಿಂದ ಪೇಟೆಂಟ್ ಪಡೆದಿದ್ದಾರೆ.
ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ರೀತಿಯಲ್ಲೇ ಹಾವು ಕಚ್ಚಿದರೆ ರಕ್ತದ ಎರಡು ಹನಿಯನ್ನು ಈ ಕಿಟ್ ನಲ್ಲಿ ಹಾಕಿದರೆ ಎರಡೇ ನಿಮಿಷದಲ್ಲಿ ಕಚ್ಚಿದ್ದು ವಿಷದ ಹಾವೋ, ವಿಷ ರಹಿತ ಹಾವೋ ಎಂದು ತಿಳಿಸುತ್ತದೆ. ವಿಷದ ಹಾವು ಕಚ್ಚಿದರೆ ಹತ್ತು ನಿಮಿಷದಲ್ಲಿ ನಮ್ಮ ಇಡೀ ದೇಹಕ್ಕೆ ಹರಡುತ್ತದೆ. ಹಾಗಾಗಿ, ಹಾವು ಕಚ್ಚಿತೆಂದು ಆತಂಕ ಪಡುವ ಬದಲು ಈ ಕಿಟ್ ಮೂಲಕ ಹಾವಿನ ವಿಷದ ಬಗ್ಗೆ ತಿಳಿದುಕೊಂಡು ಕೂಡಲೇ ಆಸ್ಪತ್ರೆಗೆ ಧಾವಿಸಬಹುದು. ಹಾವಿನ ವಿಷ ತಿಳಿಯುವಂತಹ ಯಾವುದೇ ಸಾಧನವನ್ನು ಜಗತ್ತಿನಲ್ಲಿ ಇನ್ನೂ ಅಭಿವೃದ್ಧಿ ಪಡಿಸಲಾಗಿಲ್ಲ. ಇದೇ ಮೊದಲ ಬಾರಿಗೆ ನಮ್ಮ ಭಟ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಅಭಿವೃದ್ಧಿ ಪಡಿಸಿದ್ದೇವೆ ಎಂದು ಮಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ವಿಜ್ಞಾನಿ ಶ್ಯಾಮ ಭಟ್ ತಿಳಿಸಿದ್ದಾರೆ.
ಪದವಿ ಗಳಿಸಿದ್ದರು. 16 ವರ್ಷ ಕಾಲ ಅಮೆರಿಕದ ಪೆನ್ಸಿಲ್ವೇನಿಯಾ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದು 1994ರಲ್ಲಿ ತನ್ನ ದೇಶದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ ಬಯೋಟೆಕ್ ಕಂಪನಿ ಹುಟ್ಟುಹಾಕಿದ್ದರು.
ದೇಶಾದ್ಯಂತ ಮೆಡಿಕಲ್ ಸೆಂಟರ್ ಗಳಲ್ಲಿ ಅತಿ ಕಡಿಮೆ ದರಕ್ಕೆ ಸಿಗುವ ಪ್ರೆಗ್ನೆನ್ಸಿ ಕಿಟ್ ಅನ್ನು ಮೊದಲ ಬಾರಿಗೆ ಭಾರತದಲ್ಲಿ ತಯಾರಿಸಿ ಜನಸಾಮಾನ್ಯರಿಗೆ ತಲುಪಿಸಿದ್ದೇ ಶ್ಯಾಮ ಭಟ್. ಆನಂತರ, ಮಲೇರಿಯಾ, ಎಚ್ಐವಿ, ಡೆಂಗ್ಯು ಹೆಪಟೈಟಿಸ್ ಬಿ, ಚಿಕನ್ ಗುನ್ಯಾ ಕೊರೊನಾ ಹೀಗೆ 80ಕ್ಕೂ ಹೆಚ್ಚು ಮಾದರಿಯ ರೋಗಗಳ ಪತ್ತೆಗೆ ವೈದ್ಯಕೀಯ ಕಿಟ್ ಗಳನ್ನು ತಯಾರಿಸಿದ್ದಾರೆ. ಎಚ್ಐವಿ ಕಿಟ್ ಅನ್ನು ಅತಿ ಕಡಿಮೆ ದರದಲ್ಲಿ ಸಿಗುವಂತೆ ತಯಾರಿಸಿದ್ದು ಅದಿನ್ನೂ ಮೆಡಿಕಲ್ ಅಂಗಡಿಗಳಲ್ಲಿ ಮಾರಾಟಕ್ಕೆ ಬಂದಿಲ್ಲ.
ವಿಷದ ಹಾವು ಕಚ್ಚಿದರೆ ಕೂಡಲೇ ಪತ್ತೆಹಚ್ಚಬಲ್ಲ ಕಿಟ್ ಈಗ ತಯಾರಿಸಿದ್ದೇವೆ. ಎಲ್ಲ ರೆಡಿಯಾಗಿದ್ದು, ಮಹಾರಾಷ್ಟ್ರ ಸರ್ಕಾರದಿಂದ ಪೂರೈಕೆಗೆ ಆರ್ಡರ್ ಬಂದಿದೆ. ದೇಶಾದ್ಯಂತ ಈ ಕಿಟ್ ಗಳನ್ನು ಜನರಿಗೆ ಒದಗಿಸಿದರೆ ಹಾವು ಕಚ್ಚಿ ಜನರು ಸಾಯುವುದನ್ನು ತಪ್ಪಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಹಾವುಗಳ ಬಗ್ಗೆ ಅಪನಂಬಿಕೆ, ಅಸಡ್ಡೆಯಿಂದಾಗಿ ಸಾವು ಎದುರಾಗುತ್ತದೆ. ಹಾವು ಯಾವುದಿದ್ದರೂ, ಕೂಡಲೇ ಟೆಸ್ಟ್ ಮಾಡಿ ದೇಹದಲ್ಲಿ ವಿಷ ಇದೆಯೋ ಇಲ್ಲವೋ ಎಂದು ತಿಳಿದುಕೊಂಡರೆ ಅರ್ಧ ಜೀವ ಉಳಿಯುತ್ತದೆ. ಹಳ್ಳಿ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ಲಿನಿಕ್ ಗಳಲ್ಲಿ ಇಂತಹ ಕಿಟ್ ಗಳಿದ್ದರೆ ವಿಷದ ಬಗ್ಗೆ ತಿಳಿದು ಸೂಕ್ತ ಚಿಕಿತ್ಸೆ ನೀಡಬಹುದು ಎನ್ನುತ್ತಾರೆ, ಡಾ.ಶ್ಯಾಮ್ ಭಟ್.
ಇನ್ನೊಂದು ವರ್ಷದಲ್ಲಿ ಕಚ್ಚಿರುವುದು ಯಾವ ಹಾವಿನ ವಿಷ ಎಂದು ತಿಳಿಯುವುದಕ್ಕೂ ಕಿಟ್ ರೆಡಿ ಮಾಡುತ್ತೇವೆ. ನಾಗರ ಹಾವಿನದ್ದೋ, ಕನ್ನಡಿ ಹಾವೋ, ಕಾಳಿಂಗ ಸರ್ಪವೋ ಹೀಗೆ ದೇಹಕ್ಕೆ ಸೇರಿದ ವಿಷದ ಮಾದರಿಯನ್ನು ಅನುಸರಿಸಿ ಅದು ಯಾವ ಹಾವಿನದ್ದು ಎಂದು ತಿಳಿಯುವಂತಹ ಕಿಟ್ ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದೂ ಶ್ಯಾಮ ಭಟ್ ಹೇಳುತ್ತಾರೆ. ವಿಷದ ಹಾವು ಕಚ್ಚಿದರೆ ಅದನ್ನು ತಿಳಿಯುವಂತಹ ಸಾಧನ ಯಾವುದೇ ದೇಶದಲ್ಲಿ ಅಭಿವೃದ್ಧಿ ಪಡಿಸಿಲ್ಲ. ಹಲವು ವರ್ಷಗಳ ಅಧ್ಯಯನ ಬಳಿಕ ಇದೇ ಮೊದಲ ಬಾರಿಗೆ ನಮ್ಮ ಕಂಪನಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಶ್ಯಾಮ್ ಭಟ್ ತಿಳಿಸಿದ್ದಾರೆ. ಸದ್ಯಕ್ಕೆ ಇವರ ಕಂಪನಿಯಲ್ಲಿ 300ಕ್ಕೂ ಹೆಚ್ಚು ವೃತ್ತಿ ಪರಿಣತರು ಕೆಲಸ ಮಾಡುತ್ತಿದ್ದಾರೆ. ಇವರ ಮಗ ಪವನ್ ಕುಮಾರ್ ಕೂಡ ತಂದೆಯ ಜೊತೆಗೆ ಸಾಥ್ ನೀಡುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









